ನವದೆಹಲಿ: ಒಡಿಶಾದ ಪುರಿಯಲ್ಲಿ ನಡೆಯುವ ಜಗನ್ನಾಥ ದೇವರ ರಥೋತ್ಸವವನ್ನು ಹೊರತುಪಡಿಸಿ ಬೇರೆ ಬೇರೆ ಸ್ಥಳಗಳಲ್ಲಿ 'ರಥಯಾತ್ರೆ' ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಜ್ಯ ಸರ್ಕಾರ ನೀಡಿರುವ ನಿರ್ದೇಶನಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ ಹೇಳಿದೆ.
‘ಹೀಗೆ ಹೇಳುವುದಕ್ಕೆ ನಮಗೂ ಬೇಸರವಾಗುತ್ತಿದೆ, ಕ್ಷಮಿಸಿ‘ ಎಂದು ನ್ಯಾಯಪೀಠ ಹೇಳಿದೆ.
ಒಡಿಶಾದ ಪುರಿ ಜಗನ್ನಾಥ ರಥ ಯಾತ್ರೆ ಪ್ರತಿವರ್ಷ 10ರಿಂದ 12 ದಿನಗಳ ಕಾಲ ನಡೆಯುತ್ತದೆ. ಈ ಬಾರಿ ಜುಲೈ 12 ರಂದು ರಥಯಾತ್ರೆ ನಿಗದಿಯಾಗಿದೆ. ರಾಜ್ಯ ಸರ್ಕಾರ, ಪುರಿಯಲ್ಲಿ ಮಾತ್ರ ಜಗನ್ನಾಥ ದೇವರ ರಥಯಾತ್ರೆ ನಡೆಸಲು ಅನುಮತಿ ನೀಡಿತ್ತು.