ನವದೆಹಲಿ:ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾ (70) ಅವರು ತಮ್ಮನ್ನು ನ್ಯಾಯಾಂಗ ಬಂಧನದಲ್ಲಿರಿಸುವ ಬದಲು ಗೃಹ ಬಂಧನದಲ್ಲಿರಿಸಬೇಕೆಂದು ಕೋರಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರು ಸೋಮವಾರ ನಿರಾಕರಿಸಿದರು.
ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರಿರುವ ಪೀಠದಲ್ಲಿದ್ದ ನ್ಯಾಯಮೂರ್ತಿ ಭಟ್ ಅವರು ವಿಚಾರಣೆಯ ಭಾಗವಾಗಲು ತಾವು ಅಸಮರ್ಥರು ಎಂದರು. ಆದರೆ, ಅವರು ಇದಕ್ಕೆ ಕಾರಣ ವಿವರಿಸಲಿಲ್ಲ.
ಏಪ್ರಿಲ್ 26ರಂದು ಬಾಂಬೆ ಹೈಕೋರ್ಟ್ ತಮ್ಮ ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ನವ್ಲಾಖಾ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ನವ್ಲಾಖಾ ಅವರು ವಿಚಾರಣಾಧೀನ ಕೈದಿಯಾಗಿ ತಲೋಜ ಜೈಲಿನಲ್ಲಿದ್ದಾರೆ. ಈ ಜೈಲು ಕೈದಿಗಳಿಂದ ತುಂಬಿ ತುಳುಕುತ್ತಿದೆ.ಜೈಲಿನ ಪರಿಸ್ಥಿತಿ ಮತ್ತು ವಾತಾವರಣವು ಆರೋಗ್ಯಕ್ಕೆ ಪೂರಕವಾಗಿ ಇಲ್ಲ ಎಂದು ನವ್ಲಾಖಾ, ಹೈಕೋರ್ಟ್ ಮುಂದೆಆತಂಕ ವ್ಯಕ್ತಪಡಿಸಿದ್ದರು.
ಸುಪ್ರೀಂಕೋರ್ಟ್ ಇತ್ತೀಚೆಗಷ್ಟೆ ಸಾಮಾಜಿಕ ಕಾರ್ಯಕರ್ತ, ಕವಿ ಪಿ. ವರವರ ರಾವ್ (82) ಅವರಿಗೆ ಇದೇ ಪ್ರಕರಣ ಸಂಬಂಧ ಜಾಮೀನು ನೀಡಿದೆ.