ನವದೆಹಲಿ: ಬಾಬರಿ ಮಸೀದಿ ನೆಲಸಮ ಪ್ರಕರಣದ ತೀರ್ಪು ನೀಡಿದ್ದ ನಿವೃತ್ತ ವಿಶೇಷ ನ್ಯಾಯಾಧೀಶ ಎಸ್.ಕೆ.ಯಾದವ್ ಅವರಿಗೆ ನೀಡಿದ್ದ ವೈಯಕ್ತಿಕ ಭದ್ರತೆ ಮುಂದುವರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಬಾಬರಿ ಮಸೀದಿ ಪ್ರಕರಣದ ತೀಪಿನಲ್ಲಿ ಬಿಜೆಪಿ ಮುಖಂಡರಾದ ಎಲ್.ಕೆ.ಅಡ್ವಾಣಿ, ಮುರುಳಿಮನೋಹರ ಜೋಷಿ ಸೇರಿ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಪೂರಕ ಸಾಕ್ಷ್ಯದ ಕೊರತೆ ಇದೆ ಎಂದು ಉಲ್ಲೇಖಿಸಲಾಗಿತ್ತು.
ಪ್ರಕರಣದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ತಮಗೆ ನೀಡಲಾದ ವೈಯಕ್ತಿಕ ಭದ್ರತೆಯನ್ನು ಮುಂದುವರಿಸಬೇಕು ಎಂದು ಕೋರಿ ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ಪೀಠ ವಿಚಾರಣೆ ನಡೆಸಿತು.
‘ಮನವಿಯನ್ನು ಗಮನಿಸಿದ್ದೇವೆ. ಭದ್ರತೆ ಒದಗಿಸುವುದು ಸೂಕ್ತ ಎಂದು ನಾವು ಭಾವಿಸುವುದಿಲ್ಲ’ ಎಂದು ಪೀಠ ಹೇಳಿತು.