ನವದೆಹಲಿ: ಉಷ್ಣ ವಲಯದಲ್ಲಿ ಸಂಭವಿಸುವ ಚಂಡಮಾರುತಗಳನ್ನು ಮುಂಚಿತವಾಗಿಯೇ ಪತ್ತೆ ಮಾಡಲು ವಿಜ್ಞಾನಿಗಳ ತಂಡ ವಿಭಿನ್ನ ಪದ್ಧತಿ ರೂಪಿಸಿದೆ.
ಉಪಗ್ರಹ ಪತ್ತೆ ಮಾಡುವ ಮುನ್ನವೇ ಈ ಕಾರ್ಯ ಕೈಗೊಳ್ಳುವ ವ್ಯವಸ್ಥೆ ಇದಾಗಿದೆ. ವಾತಾವರಣದಲ್ಲಿ ಸಂಭವಿಸುವ ಸುಂಟರಗಾಳಿ ಮತ್ತು ಸುಳಿಗಳ ವಿಶ್ಲೇಷಣೆ ನಡೆಸಿ ಚಂಡಮಾರುತ ಸಂಭವಿಸುವುದನ್ನು ಪತ್ತೆ ಮಾಡುವ ವಿಧಾನವನ್ನು ರೂಪಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿದೆ.
ಇದುವರೆಗೆ ರಿಮೋಟ್ ಸೆನ್ಸಿಂಗ್ ತಂತಜ್ಞಾನದ ಮೂಲಕವೇ ಚಂಡಮಾರುತಗಳು ಸಂಭವಿಸುವುದನ್ನು ಪತ್ತೆ ಮಾಡಲಾಗುತ್ತಿದೆ. ಆದರೆ, ಸಮುದ್ರದ ಮೇಲ್ಮೈ ಪ್ರದೇಶದಲ್ಲಿ ವಾಯುಭಾರ ಕುಸಿತವಾದ ಬಳಿಕವೇ ಇದು ಸಾಧ್ಯವಾಗಲಿದೆ.
ಚಂಡಮಾರುತ ಸಂಭವಿಸುವುದನ್ನು ಸಾಧ್ಯವಾದಷ್ಟು ಮುಂಚಿತವಾಗಿಯೇ ಗುರುತಿಸಿದರೆ, ಅದರಿಂದ ಉಂಟಾಗುವ ಹಾನಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದು. ಜತೆಗೆ, ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ಸಾಕಷ್ಟು ಸಮಯಾವಕಾಶ ದೊರೆಯುವುದರಿಂದ ಅನುಕೂಲವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಬಗ್ಗೆ ಕೈಗೊಳ್ಳಲಾದ ಸಂಶೋಧನೆಯನ್ನು ‘ಅಟ್ಮಾಸ್ಪೆರಿಕ್ ರಿಸರ್ಚ್’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.
ಖರಗಪುರ ಐಐಟಿಯ ಜಿಯಾ ಅಲ್ಬರ್ಟ್, ವಿಷ್ಣುಪ್ರಿಯಾ ಸಾಹೂ ಮತ್ತು ಪ್ರಸಾದ್ ಕೆ. ಭಾಸ್ಕರನ್ ಅವರು ಈ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ.