ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿಪಥ’ ರದ್ದತಿ ಪ್ರಶ್ನೆಯೇ ಇಲ್ಲ: ಸೇನೆ ಸ್ಪಷ್ಟನೆ

ದೇಶದ ವಿವಿಧೆಡೆ ಪ್ರತಿಭಟನೆಯ ನಡುವೆಯೇ ನೇಮಕಾತಿ ನಡೆಸಲು ಸಿದ್ಧತೆ
Last Updated 19 ಜೂನ್ 2022, 19:20 IST
ಅಕ್ಷರ ಗಾತ್ರ

ನವದೆಹಲಿ: ಅಲ್ಪಾವಧಿ ಕರ್ತವ್ಯದ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ’ ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ತೀವ್ರತರವಾದ ಪ್ರತಿಭಟನೆ ನಡೆಯುತ್ತಿದ್ದರೂ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸೇನೆಯು ಭಾನುವಾರ
ಸ್ಪಷ್ಟಪಡಿಸಿದೆ.

ನೇಮಕಾತಿ ಪ್ರಕ್ರಿಯೆಯ ಕರಡು ವೇಳಾಪಟ್ಟಿಯನ್ನು ರಕ್ಷಣಾ ಪಡೆಗಳ ಮೂರೂ ವಿಭಾಗಗಳು ಪ್ರಕಟಿಸಿವೆ. ಸಶಸ್ತ್ರ ಪಡೆಗಳ ಯೋಧರ ಸರಾಸರಿ ವಯಸ್ಸನ್ನು ಕಡಿತ ಮಾಡುವುದೇ ಅಗ್ನಿಪಥ ಯೋಜನೆಯ ಉದ್ದೇಶ ಎಂದು ಸೇನೆಯು ತಿಳಿಸಿದೆ.

ಅಗ್ನಿಪಥ ಯೋಜನೆಗೆ ಸಂಬಂಧಿಸಿ ಸರ್ಕಾರ ಕೈಗೊಂಡ ಪೂರಕ ಕ್ರಮಗಳಿಗೆ ದೇಶದ ವಿವಿಧೆಡೆ ನಡೆದ ಪ್ರತಿಭಟನೆಗಳು ಕಾರಣವಲ್ಲ. ಈ ದಿಸೆಯಲ್ಲಿ ಸರ್ಕಾರವು ಮೊದಲೇ ಚಿಂತನೆ ಆರಂಭಿಸಿತ್ತು ಎಂದು ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್‌ ಅನಿಲ್ ಪುರಿ ಹೇಳಿದ್ದಾರೆ.

ಯೋಜನೆಯನ್ನು ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದವರಿಗೆ ಸೇನೆಯ ಯಾವುದೇ ವಿಭಾಗಕ್ಕೆ ಸೇರಲು ಅವಕಾಶ ಇಲ್ಲ. ನೇಮಕಾತಿಗೆ ಮುನ್ನ ಪ್ರತಿಯೊಬ್ಬರ ಬಗ್ಗೆಯೂ ಪೊಲೀಸ್‌ ಪರಿಶೀಲನೆ ನಡೆಯಲಿದೆ. ಯಾವುದೇ ರೀತಿಯ ಅಶಿಸ್ತಿಗೆ ಸಶಸ್ತ್ರ ಪಡೆಯಲ್ಲಿ ಅವಕಾಶ ಇಲ್ಲ. ಅಗ್ನಿಪಥ ಯೋಜನೆಯ ಭಾಗವಾಗಲು ಬಯಸುವವರು ತಾವು ದೊಂಬಿಯಲ್ಲಿ ಭಾಗವಹಿಸಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಪುರಿ ಅವರು ವಿವರಿಸಿದ್ದಾರೆ.

ವರ್ಷಗಳ ಚಿಂತನೆ ಮತ್ತು ವಿವಿಧ ದೇಶಗಳಲ್ಲಿ ಇರುವ ಸೈನಿಕರ ಕರ್ತವ್ಯದ ಅವಧಿ ಬಗ್ಗೆ ಅಧ್ಯಯನ ನಡೆಸಿದ ಬಳಿಕವೇ ಈ ಯೋಜನೆಯನ್ನು ಪ್ರಕಟಿಸಲಾಗಿದೆ. 1999ರ ಕಾರ್ಗಿಲ್‌ ಯುದ್ಧದ ಬಗ್ಗೆ ಅಧ್ಯಯನ ನಡೆಸಿದ್ದ ಉನ್ನತಾಧಿಕಾರ ಸಮಿತಿ ಕೂಡ ಇಂತಹದೇ ಸಲಹೆ ನೀಡಿತ್ತು ಎಂದು ಪುರಿ ತಿಳಿಸಿದ್ದಾರೆ.

ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರ ಜತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಮಾತುಕತೆ ನಡೆಸಿದ ಕೆಲವೇ ತಾಸುಗಳಲ್ಲಿ ಸೇನೆಯ ಮೂರೂ ವಿಭಾಗಗಳ ಮಾಧ್ಯಮಗೋಷ್ಠಿ ನಡೆದಿದೆ.

ತಾತ್ಕಾಲಿಕ ವೇಳಾಪಟ್ಟಿ

ನೌಕಾಪಡೆ

* ನೇಮಕಾತಿ ಮಾರ್ಗಸೂಚಿಯು ಇದೇ 25ರಂದು ಪ್ರಕಟ

* ಅಗ್ನಿಪಥ ಯೋಜನೆ ಅಡಿಯಲ್ಲಿ ನೇಮಕವಾಗುವ ಮೊದಲ ತಂಡವು ನವೆಂಬರ್‌ 21ರಂದು ಐಎನ್‌ಎಸ್‌ ಚಿಲ್ಕಾದಲ್ಲಿ ತರಬೇತಿಗೆ ಸೇರ್ಪಡೆ

* ಅಗ್ನಿವೀರರಾಗಿ (ಅಗ್ನಿಪಥ ಯೋಜನೆಯಲ್ಲಿ ನೇಮಕಗೊಂಡವರನ್ನು ಅಗ್ನಿವೀರ ಎಂದು ಕರೆಯಲಾಗುತ್ತದೆ) ಮಹಿಳೆ ಮತ್ತು ಪುರುಷರ ನೇಮಕಕ್ಕೆ ಅವಕಾಶ

ವಾಯುಪಡೆ

* ಮೊದಲ ಹಂತದ ಆನ್‌ಲೈನ್‌ ಪರೀಕ್ಷೆಯ ನೋಂದಣಿ ಪ್ರಕ್ರಿಯೆ ಇದೇ 24ಕ್ಕೆ ಆರಂಭ

* ನೇಮಕಾತಿ ಪ್ರಕ್ರಿಯೆಗೆ ಜುಲೈ 24ರಂದು ಚಾಲನೆ

* ಡಿಸೆಂಬರ್‌ 30ಕ್ಕೆ ಮೊದಲ ತಂಡದ ತರಬೇತಿ ಆರಂಭ

ಭೂಸೇನೆ

* ಕರಡು ಅಧಿಸೂಚನೆ ಸೋಮವಾರ ಪ್ರಕಟ

*ವಿವಿಧ ವಿಭಾಗಗಳ ಅಧಿಸೂಚನೆಗಳು ಜುಲೈ 1ರಿಂದ ಪ್ರಕಟ ಆಗಲಿವೆ

* ಸೇನೆಯ ಮೂರೂ ವಿಭಾಗಗಳ ನೇಮಕಾತಿ ರ‍್ಯಾಲಿಗಳು ಆಗಸ್ಟ್‌, ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ನಡೆಯಲಿವೆ, ದೇಶದಾದ್ಯಂತ 83 ರ‍್ಯಾಲಿಗಳು, ಸುಮಾರು 40 ಸಾವಿರ ಅಗ್ನಿವೀರರ ನೇಮಕ

* ಮೊದಲ ಹಂತದಲ್ಲಿ 25 ಸಾವಿರ ಸಿಬ್ಬಂದಿ ನೇಮಕ, ಡಿಸೆಂಬರ್‌ ಮೊದಲ, ಎರಡನೇ ವಾರದಲ್ಲಿ ತರಬೇತಿ

* ಎರಡನೇ ತಂಡಕ್ಕೆ ಫೆಬ್ರುವರಿ 23ರಿಂದ ತರಬೇತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT