ಮುಂಬೈ:ಏಕನಾಥ ಶಿಂಧೆ ಅವರು ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಸಚಿವ ಸಂಪುಟದ ಮೊದಲ ಸಭೆಯನ್ನು ನಡೆಸಿದರು.
ವಿಧಾನಸಭೆಯ ವಿಶೇಷ ಅಧಿವೇಶವನ್ನು ಜುಲೈ 2 ಮತ್ತು 3ರಂದು ನಡೆಸುವ ನಿರ್ಧಾರವನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಅಧಿವೇಶನದ ಮೊದಲ ದಿನ ಸ್ಪೀಕರ್ ಆಯ್ಕೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊದಲ ದಿನವೇ ಮುಖ್ಯಮಂತ್ರಿ ಶಿಂಧೆ ಅವರು ವಿಶ್ವಾಸಮತ ಯಾಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆಯಾದರೂ, ಈ ಕುರಿತು ಅಧಿಕೃತ ಮಾಹಿತಿ ಇಲ್ಲ.
‘ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಬೇಕು. ಈ ದಿಸೆಯಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂಬುದಾಗಿ ಶಿಂಧೆ ಅವರು ಸಭೆಯಲ್ಲಿ ಸೂಚಿಸಿದರು’ ಎಂದು ಪ್ರಕಟಣೆ ತಿಳಿಸಿದೆ.
‘ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅನುಭವಿಯಾಗಿದ್ದು, ನಮ್ಮ ಸಂಪುಟದಲ್ಲಿ ಇರುವುದು ಆಡಳಿತಾತ್ಮಕವಾಗಿ ನನಗೆ ನೆರವಾಗುವುದು’ ಎಂದೂ ಅವರು ಹೇಳಿದ್ದಾಗಿ ಪ್ರಕಟಣೆ ತಿಳಿಸಿದೆ.
‘ಆಡಳಿತಾತ್ಮಕ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ನೀಡಬೇಕು’ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ಬಿತ್ತನೆ ಕಾರ್ಯದ ಪ್ರಗತಿ ಬಗ್ಗೆಯೂ ಶಿಂಧೆ ಹಾಗೂ ಫಡಣವೀಸ್ ಅವರು ಮಾಹಿತಿ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.