ಮುಂಬೈ: ಕೋವಿಡ್ ಮೂರನೇ ಅಲೆ ಹರಡುವಿಕೆಯನ್ನು ನೆಪವಾಗಿಸಿಕೊಂಡಿರುವ ಆಡಳಿತಾರೂಡ ಶಿವಸೇನಾ ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯನ್ನು ಮುಂದೂಡಲು ಸಂಚು ರೂಪಿಸಿದೆ ಎಂದು ಬಿಜೆಪಿ ಶಾಸಕ ಆಶಿಶ್ ಶೆಲಾರ್ ಆರೋಪಿಸಿದ್ದಾರೆ.
ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪಿಸಲು ಕರೆದಿರುವ ₹20,000 ಕೋಟಿ ಟೆಂಡರ್ನಲ್ಲಿ ಕಮಿಷನ್ ಪಡೆಯುವ ಸಲುವಾಗಿ ಶಿವಸೇನಾ ಪಾಲಿಕೆ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಶೆಲಾರ್ ಆರೋಪಿಸಿದ್ದಾರೆ.
ಬಿಎಂಸಿ ಚುನಾವಣೆ ಮುಂದೂಡುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಶೆಲಾರ್ ಹೇಳಿದ್ದಾರೆ.
2014 ರಿಂದ 2019 ರವರೆಗೆ ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. 2017ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಫರ್ಧಿಸಿದ್ದವು. ಈ ಚುನಾವಣೆಯಲ್ಲಿ ಶಿವಸೇನಾ 84, ಬಿಜೆಪಿ 82 ಸ್ಥಾನ ಪಡೆದಿದ್ದವು.