ಶೋಪಿಯಾನ್: ಕಳೆದ ಜುಲೈನಲ್ಲಿ ಕಾಶ್ಮೀರದ ಶೋಪಿಯಾನ್ನಲ್ಲಿ ನಡೆದಿದ್ದ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಸೇನಾ ಕ್ಯಾಪ್ಟನ್ ಭಾಗಿಯಾಗಿದ್ದು, ಇವರು ಮತ್ತು ಇನ್ನಿಬ್ಬರು ನಾಗರಿಕರು ಸಾಕ್ಷ್ಯ ನಾಶ ಪಡೆಸಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆರೋಪಪಟ್ಟಿ ಸಲ್ಲಿಸಲಾಗಿದೆ.
ಕ್ಯಾಪ್ಟನ್ ಭೂಪೇಂದ್ರ ಸಿಂಗ್ ಇದರ ಜೊತೆಗೆ ತನ್ನ ಮೇಲಧಿಕಾರಿಗಳಿಗೆ, ದಾಳಿ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಪರಿಕರಗಳ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ನ ವಿಶೇಷ ತನಿಖಾ ಸಂಸ್ಥೆ (ಎಸ್ಐಟಿ) ಆರೋಪಪಟ್ಟಿಯಲ್ಲಿ ದಾಖಲಿಸಿದೆ.
2020ರ ಜುಲೈ 18 ರಂದು ಶೋಪಿಯಾನ್ನ ಅಂಶಿಪುರದಲ್ಲಿ ಎನ್ಕೌಂಟರ್ ನಡೆದಿತ್ತು. ಇದರಲ್ಲಿ ಮೂವರು ಯುವಕರು ಮೃತಪಟ್ಟಿದ್ದು, ಅವರನ್ನು ಭಯೋತ್ಪಾದಕರು ಎಂದು ಬಿಂಬಿಸಲಾಗಿತ್ತು. ಮೂವರು ಯುವಕರು ಅಮಾಯಕರು ಎಂಬ ಅಂಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಸೇನೆಯು ತನಿಖೆಗೆ ಆದೇಶಿಸಿತ್ತು.
ಶವಗಳ ಬಳಿ ಇರಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ಕಾನೂನುಬಾಹಿರವಾಗಿ ವ್ಯವಸ್ಥೆ ಮಾಡಿಕೊಂಡಿದ್ದು, ಅದರ ಮೂಲ ತಿಳಿದುಬಂದಿಲ್ಲ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.