ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಯಸಿ ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟು ಮತ್ತೊಬ್ಬಳನ್ನು ಕರೆತಂದಿದ್ದ!

ದೆಹಲಿ ಶ್ರದ್ಧಾ ಕೊಲೆಗಾರ ಅಫ್ತಾಬ್‌ ಕರಾಳ ಮುಖ ಬೆಳಕಿಗೆ
Last Updated 26 ನವೆಂಬರ್ 2022, 11:29 IST
ಅಕ್ಷರ ಗಾತ್ರ

ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ಶ್ರದ್ಧಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾಳ ಸತ್ಯಗಳು ಒಂದರ ಹಿಂದೆ ಒಂದರಂತೆ ಹೊರಬರುತ್ತಿವೆ. ಕೊಲೆಗಾರ ಅಫ್ತಾಬ್‌ ಅಮಿನ್‌ ಪೂನವಾಲಾ ಪ್ರೇಯಸಿ ಶ್ರದ್ಧಾಳನ್ನು ಕೊಲೆಗೈದು, ದೇಹದ ತುಂಡುಗಳನ್ನು ಕತ್ತರಿಸಿ ಮನೆಯ ಫ್ರಿಡ್ಜ್‌ನಲ್ಲಿ ಇಟ್ಟಿರುವಾಗಲೇ ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತಂದಿದ್ದ ಎಂಬ ಸತ್ಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ವರದಿ ಪ್ರಕಾರ ಶ್ರದ್ಧಾ ಕೊಲೆಯ ಬಳಿಯ ಅಫ್ತಾಬ್‌ ಬಂಬ್ಲ್‌ ಎಂಬ ಡೇಟಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತ್ತೊಂದು ಮಹಿಳೆಯ ಸಂಪರ್ಕ ಸಾಧಿಸಿದ್ದ. ಶ್ರದ್ಧಾ ದೇಹದ ಕತ್ತರಿಸಿ ತುಂಡಾಗಿಸಿ, ಅದನ್ನು ದಕ್ಷಿಣ ದೆಹಲಿಯ ಮೆಹ್ರೌಲಿಯ ಅಪಾರ್ಟ್‌ಮೆಂಟ್‌ನ ಫ್ರಿಡ್ಜ್‌ನಲ್ಲಿ ಇಟ್ಟಿರುವಾಗಲೇ ಹೊಸ ಗೆಳತಿಯನ್ನು ಮನೆಗೆ ಕರೆತಂದಿದ್ದ. ಶ್ರದ್ಧಾಳನ್ನು ಕೂಡ ಈತ 2019ರಲ್ಲಿ ಇದೇ ಆ್ಯಪ್‌ನಲ್ಲಿ ಭೇಟಿಯಾಗಿದ್ದ ಎಂದು ವರದಿ ಹೇಳಿದೆ.

ಹೊಸ ಗೆಳತಿ ಜೂನ್‌ ಮತ್ತು ಜುಲೈನಲ್ಲಿ ಕೆಲವು ಸಲ ಅಫ್ತಾಬ್‌ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದಾಳೆ. ಅಡುಗೆ ಕೋಣೆಯ ಫ್ರಿಡ್ಜ್‌ನಲ್ಲಿ ಶ್ರದ್ಧಾ ದೇಹದ ಭಾಗಗಳಿರುವಾಗಲೇ ಈತ ಹೊಸ ಗೆಳತಿಗೆ ಮನೆಯಲ್ಲೇ ಆತಿಥ್ಯ ನೀಡಿದ್ದಾನೆ.

ಶ್ರದ್ಧಾ ಕೊಲೆಯ ನಂತರ ಆಕೆಯ ಕ್ರೆಡಿಟ್‌ ಕಾರ್ಡ್‌ಗಳ ಬಿಲ್‌ಗಳನ್ನು ಈತ ಪಾವತಿಸಿದ್ದ. ಆಕೆಯ ಸಾಮಾಜಿಕ ಜಾಲತಾಣದ ಪುಟಗಳಿಗೆ ಲಾಗಿನ್‌ ಆಗಿ ಮೆಸೇಜ್‌ಗಳಿಗೆ ಉತ್ತರಿಸಿದ್ದ. ಪೋಸ್ಟ್‌ಗಳನ್ನು ಮಾಡಿದ್ದ. ಆಕೆ ಬದುಕಿದ್ದಾಳೆ ಎಂದು ಬಿಂಬಿಸಲು ಆಕೆಯ ಸ್ನೇಹಿತರಿಗೆ ಆಕೆಯ ಖಾತೆಯಿಂದ ಸಂದೇಶಗಳನ್ನು ಕೂಡ ಕಳುಹಿಸಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಮುಂಬೈನಲ್ಲಿ ಇರುವಾಗಲೇ ಇಬ್ಬರ ನಡುವೆ ಸಾಕಷ್ಟು ಜಗಳ ನಡೆಯುತ್ತಿತ್ತು. ಸಂಬಂಧದ ಕುರಿತು ಅನುಮಾನಗೊಂಡಿದ್ದ ಇಬ್ಬರೂ ಫೋನ್‌ ಜಿಪಿಎಸ್‌ ಮತ್ತು ಫೋಟೊಗಳನ್ನು ಟ್ರೇಸ್‌ ಮಾಡುತ್ತಿದ್ದರು. ಸಂಬಂಧ ಸುಧಾರಣೆಗಾಗಿ ಏಪ್ರಿಲ್‌ನಲ್ಲಿ ಹಿಮಾಚಲ ಪ್ರದೇಶ ಪ್ರವಾಸ ಯೋಜಿಸಿದ್ದರು. ಅದಾದ ಬಳಿಕ ದೆಹಲಿಗೆ ಸ್ಥಳಾಂತರಗೊಂಡಿದ್ದರು.

ಮೇ.15ರಂದು ದೆಹಲಿಗೆ ಸ್ಥಳಾಂತರಗೊಂಡ 3 ದಿನಗಳ ನಂತರ ಮತ್ತೆ ಜಗಳವಾಗಿದ್ದು, ಶ್ರದ್ಧಾಳನ್ನು ಕೊಲೆಗೈದಿದ್ದಾನೆ. ಅಫ್ತಾಬ್‌ ಅಮೆರಿಕದ ಕ್ರೈಂ ಸರಣಿ ‘ಡೆಕ್ಸ್‌ಟರ್‌’ನಿಂದ ಸ್ಫೂರ್ತಿ ಪಡೆದಿದ್ದ. ಕೊಲೆಗಾಗಿ ಸಾಕಷ್ಟು ಸಂಶೋಧನೆ ಮಾಡಿದ್ದ. ಮನುಷ್ಯನ ದೇಹ ರಚನಾ ಶಾಸ್ತ್ರ ಅಧ್ಯಯನ ಮಾಡಿದ್ದ. ರಕ್ತದ ಕಲೆ ಕಾಣಿಸದಂತೆ ಮಾಡುವ ಮಾರ್ಗಗಳ ಕುರಿತು ಹುಡುಕಾಟ ನಡೆಸಿದ್ದ ಎಂದು ವರದಿಯಾಗಿದೆ.
‘ಹುಡುಗಿಯೊಬ್ಬಳು ಕಾಣೆಯಾದ ಮತ್ತೊಂದು ದೂರು ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಮತ್ತು ವಿಚಾರಣೆಯ ಸಮಯದಲ್ಲಿ, ಕಾಣೆಯಾದ ಹುಡುಗಿಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮತ್ತು ವಿವರಗಳನ್ನು ಕೇಳಲಾಗಿದೆ’ ಎಂದು ನಗರದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಂಕಿತ್ ಚೌಹಾಣ್ ಹೇಳಿದ್ದಾರೆ.

ಅಫ್ತಾಬ್‌ ಇದೇ ರೀತಿ 3–4 ಹುಡುಗಿಯರಿಗೆ ಮೋಸ ಮಾಡಿದ್ದಾನೆ. ಅವರೆಲ್ಲ ಬದುಕಿದ್ದಾರೆಯೇ ಇಲ್ಲವೇ ಎಂದು ಪತ್ತೆಹಚ್ಚಿ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT