ನವದೆಹಲಿ: ಕೆಲವು ಮುಸ್ಲಿಂಮರಿಗೆ ದೇಶದ ವಿಜ್ಞಾನಿಗಳ ಬಗ್ಗೆ ನಂಬಿಕೆಯಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಆರೋಪಿಸಿದ್ದಾರೆ.
ಕೋವಿಡ್-19 ಲಸಿಕೆ ಸಂಬಂಧ ವಿರೋಧ ಪಕ್ಷಗಳಿಂದ ಎದುರಾಗಿರುವ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರಾದ ಸಂಗೀತ್ ಸೋಮ್ ಈ ರೀತಿಯಾದ ಪ್ರತಿಕ್ರಿಯೆ ನೀಡಿದ್ದಾರೆ.
ದುರದೃಷ್ಟವಶಾತ್ ಕೆಲವು ಮುಸ್ಲಿಂಮರಿಗೆ ದೇಶದ ವಿಜ್ಞಾನಿಗಳು ಮತ್ತು ಪೊಲೀಸರ ಮೇಲೆ ನಂಬಿಕೆಯಿಲ್ಲ. ಅವರಿಗೆ ಪ್ರಧಾನ ಮಂತ್ರಿಯಲ್ಲೂ ನಂಬಿಕೆಯಿಲ್ಲ. ಅವರಿಗೆ ಪಾಕಿಸ್ತಾನದ ಮೇಲೆ ನಂಬಿಕೆಯಿದೆ. ಅವರು ಅಲ್ಲಿಗೆ ಹೋಗಬಹುದು. ಆದರೆ ವಿಜ್ಞಾನಿಗಳ ಬಗ್ಗೆ ಅನುಮಾನಪಡುತ್ತಾರೆ ಎಂದು ಸಂಗೀತ್ ಸೋಮ್ ಆರೋಪಿಸಿದರು.
ಏತನ್ಮಧ್ಯೆ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಎಂದು ದೂರಿದರು. ಅಲ್ಲಿ ಧರಣಿ ನಡೆಸುತ್ತಿರುವವರು ರೈತರಲ್ಲ. ಬದಲಿಗೆ ರೈತ ವಿರೋಧಿಗಳು ಎಂದು ಹೇಳಿದರು.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಂಗೀತ್ ಸೋಮ್, ಅವರ ಆಡಳಿತದಲ್ಲಿ ಉತ್ತರ ಪ್ರದೇಶವು ಮೊಘಲ್ ಸುಲ್ತಾನವಾಗಿ ಮಾರ್ಪಾಟ್ಟಿತ್ತು. ಅವರು ಮೊಘಲ್ ಆಳ್ವಿಕೆಯ ಕೊನೆಯ ರಾಜನಾಗಿದ್ದು, ಮಗದೊಂದು ಅವಕಾಶ ಸಿಗಲಾರದು ಎಂದು ಟೀಕಿಸಿದರು.