ನವದೆಹಲಿ: ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆಯು ಧಕ್ಕೆ ತರುತ್ತದೆ. ಯಾವುದೇ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುವುದು ಮಾನವೀಯತೆಯ ವಿರುದ್ಧದ ಅಪರಾಧವೇ ಆಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ದುಶಾಂಬೆಯಲ್ಲಿ ಬುಧವಾರ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ರಕ್ಷಣಾ ಸಚಿವರ ಸಮಾವೇಶದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯ ವಿರುದ್ಧ ಭಾರತ ಎಲ್ಲಾ ರೀತಿಯಲ್ಲೂ ಹೋರಾಡುವ ಸಂಕಲ್ಪ ಹೊಂದಿದೆ ಎಂದು ಪುನರುಚ್ಚರಿಸಿದರು.
ಶಾಂತಿ ಮತ್ತು ಸಮೃದ್ಧಿಯು ಭಯೋತ್ಪಾದನೆಯೊಂದಿಗೆ ಸಹಬಾಳ್ವೆ ನಡೆಸಲು ಸಾಧ್ಯವೇ ಇಲ್ಲ ಅವರು ಪಾಕಿಸ್ತಾನವನ್ನು ಉದ್ದೇಶಿಸಿ ಹೇಳಿದರು.
‘ಯಾವುದೇ ರೀತಿಯ ಭಯೋತ್ಪಾದನೆ ಸಹಿಸಲಾಗುದು. ಅದಕ್ಕೆ ಬೆಂಬಲ ನೀಡುವವರು ಯಾರೇ ಆಗಲಿ, ಎಲ್ಲಿಯೇ ಇರಲಿ, ಅವರ ಉದ್ದೇಶಗಳು ಮಾನವೀಯತೆಯ ವಿರುದ್ಧದ ಅಪರಾಧ ಎಸಗುವುದೇ ಆಗಿದೆ. ಅವರ ವಿರುದ್ಧ ಭಾರತ ಎಲ್ಲ ರೀತಿಯಲ್ಲೂ ಹೋರಾಡುವ ದೃಢ ಸಂಕಲ್ಪ ಹೊಂದಿದೆ’ ಎಂದರು.
ಚೀನಾ, ರಷ್ಯಾ ಮತ್ತು ಎಸ್ಸಿಒದ ಇತರ ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.