ನವದೆಹಲಿ: ಹಾಸನ ಕ್ಷೇತ್ರದಿಂದ ಲೋಕಸಭೆಗೆ ಪ್ರಜ್ವಲ್ ರೇವಣ್ಣ ಆಯ್ಕೆ ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ.
ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ನೀಡಿದ್ದ ಪ್ರಮಾಣಪತ್ರದಲ್ಲಿ ಆಸ್ತಿ ವಿವರಗಳನ್ನು ಪೂರ್ಣವಾಗಿ ಘೋಷಿಸಿಲ್ಲ ಎಂದು ದೂರಿ ಮಂಜು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಜ.17, 2020ರಂದು ವಜಾ ಮಾಡಿತ್ತು.
ಆದೇಶ ಅಸಿಂಧುಗೊಳಿಸಿದ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ.ಸಂದರೇಶ್ ಅವರಿದ್ದ ಪೀಠವು, ಪ್ರಜ್ವಲ್ ರೇವಣ್ಣ ಅವರು ನಿಯಮ ಉಲ್ಲಂಘಿಸಿದ್ದಾರೆಯೇ, ಇಲ್ಲವೇ ಎಂಬುದು ತನಿಖೆಗೆ ಒಳಪಡಬೇಕಾದ ವಿಷಯ ಎಂದು ಹೇಳಿತು.
ಚುನಾವಣೆ ನಡೆದು ಈಗಾಗಲೇ ಎರಡೂವರೆ ವರ್ಷ ಕಳೆದಿದೆ. ಹೀಗಾಗಿ, ಪ್ರಕರಣವನ್ನು ಹೊಸದಾಗಿ ಗಮನಿಸಬೇಕು ಎಂದು ಕರ್ನಾಟಕ ಹೈಕೋರ್ಟ್ಗೆ ಪೀಠ ಸೂಚಿಸಿತು. ಅಲ್ಲದೆ, 15 ದಿನದಲ್ಲಿ ಈ ಸಂಬಂಧ ಹೊಸದಾಗಿ ಪ್ರಮಾಣಪತ್ರ ಸಲ್ಲಿಸಲು ಅರ್ಜಿದಾರ ಎ.ಮಂಜು ಅವರಿಗೆ ಪೀಠವು ಅನುಮತಿ ನೀಡಿತು.