ನವದೆಹಲಿ: ‘ಪಂಚಾಯಿತಿ ಚುನಾವಣೆ ವೇಳೆ ಕೋವಿಡ್ನಿಂದ ಮೃತಪಟ್ಟ ಶಿಕ್ಷಕರು,ಕಾರ್ಯಕರ್ತರು ಜೀವಂತವಾಗಿದ್ದಾಗ ಸರ್ಕಾರವು ಸರಿಯಾದ ಚಿಕಿತ್ಸೆ ನೀಡಿರಲಿಲ್ಲ. ಸಾವಿನ ನಂತರವೂ ಅವರಿಗೆ ಗೌರವ ನೀಡದಿರಲು ಪ್ರಯತ್ನಿಸುತ್ತಿದೆ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಉತ್ತರ ಪ್ರದೇಶದಲ್ಲಿಏಪ್ರಿಲ್ ಮೊದಲ ವಾರದಿಂದ ಮೇ 16ರ ತನಕ ಕೋವಿಡ್ನಿಂದ 1,600 ಕ್ಕೂ ಹೆಚ್ಚು ಶಿಕ್ಷಕರು ಮತ್ತು ಮೂಲ ಶಿಕ್ಷಣ ಇಲಾಖೆಯ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ. ಇದರಲ್ಲಿ ಶೇಕಡ 90ರಷ್ಟು ಜನರು ಪಂಚಾಯತಿ ಚುನಾವಣೆ ಕರ್ತವ್ಯದಲ್ಲಿದ್ದರು’ ಎಂದು ಶಿಕ್ಷಕರ ಸಮಿತಿಯೊಂದು ಹೇಳಿತ್ತು.
ಪಂಚಾಯತಿ ಚುನಾವಣೆಯ ಕರ್ತವ್ಯದಲ್ಲಿ ನಿರತರಾಗಿದ್ದ 1,621 ಶಿಕ್ಷಕರು ಕೋವಿಡ್ನಿಂದ ಮೃತಪಟ್ಟಿದ್ಧಾರೆ ಎಂದು ಉತ್ತರ ಪ್ರದೇಶದ ಶಿಕ್ಷಕ ಸಂಘವು ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದನ್ನು ನಿರಾಕರಿಸಿರುವ ಸರ್ಕಾರವು, ಕೇವಲ 3 ಶಿಕ್ಷಕರು ಮೃತಪಟ್ಟಿದ್ದಾರೆ ಎಂದು ಹೇಳಿತ್ತು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ, ‘ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಸರಿಯಾದ ಸುರಕ್ಷತಾ ಸಾಧನಗಳನ್ನು ನೀಡಿರಲಿಲ್ಲ. ಅವರು ಜೀವಂತವಾಗಿದ್ದಾಗ ಸರಿಯಾದ ಚಿಕಿತ್ಸೆ ಕೂಡ ನೀಡಿಲ್ಲ. ಸಾವಿನ ಬಳಿಕವೂ ಅವರ ಗೌರವವನ್ನು ಕಿತ್ತುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ’ಎಂದಿದ್ದಾರೆ.