ಪಟ್ನಾ: ಶಾಸಕರ ಹಾಜರಾತಿ ಕಡಿಮೆ ಇದೆ ಎಂಬ ಕಾರಣ ನೀಡಿ ಬಿಹಾರ ವಿಧಾನಸಭೆಯ ಕಲಾಪವನ್ನು ಮಂಗಳವಾರ ಮುಂದೂಡಲಾಯಿತು. ಈ ಬೆಳವಣಿಗೆ, ಆಡಳಿತಾರೂಢ ಪಕ್ಷವಾದ ಬಿಜೆಪಿಯನ್ನು ಕೆರಳಿಸಿತು.
ಈ ವಿದ್ಯಮಾನವು ಆಡಳಿತಾರೂಢ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಯು ನಡುವಿನ ಭಿನ್ನಾಭಿಪ್ರಾಯವನ್ನು ಮತ್ತೊಮ್ಮೆ ಬಹಿರಂಗಗೊಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಲ್ಲದೇ, ಅಗ್ನಿಪಥ ಯೋಜನೆಯನ್ನು ಮುಂದಿಟ್ಟುಕೊಂಡು ಆರ್ಜೆಡಿ ನೇತೃತ್ವದ ವಿರೋಧ ಪಕ್ಷಗಳು ವಿಧಾನಸಭೆ ಕಲಾಪಕ್ಕೆ ಪದೇಪದೇ ಅಡ್ಡಿಯನ್ನುಂಟು ಮಾಡುತ್ತಿವೆ. ವಿರೋಧ ಪಕ್ಷಗಳ ಈ ನಡೆಗೆ ಆಡಳಿತಾರೂಢ ಪಕ್ಷವಾದ ಜೆಡಿಯುನ ಬೆಂಬಲ ಇದೆ ಎಂಬುದಾಗಿ ಅರ್ಥೈಸಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಕಲಾಪಕ್ಕೆ ಅಡ್ಡಿಯನ್ನುಂಟು ಮಾಡುತ್ತಿರುವ ವಿರೋಧ ಪಕ್ಷಗಳಿಗೆ ಪಕ್ಷವು ಪ್ರಚೋದನೆ ನೀಡುತ್ತಿದೆ ಎಂಬ ಆರೋಪಗಳನ್ನು ಜೆಡಿಯು ನಾಯಕರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.