ನವದೆಹಲಿ: ಭಾರತದಲ್ಲಿ ಹೂಡಿಕೆಗೆ ಇದು ಸೂಕ್ತ ಸಮಯ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವ ಆರ್ಥಿಕ ಶೃಂಗ (ಡಬ್ಲ್ಯುಇಎಫ್)ದಲ್ಲಿ ಹೇಳಿದ್ದಾರೆ.
ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದ ಕಾರ್ಯಸೂಚಿಯನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವು ಇಡೀ ಜಗತ್ತಿಗೆ ಭರವಸೆಯ ಹೂಗುಚ್ಛವನ್ನು ನೀಡಿದೆ ಎಂದು ಹೇಳಿದರು. ‘ಈ ಹೂಗುಚ್ಛವು ಪ್ರಜಾಪ್ರಭುತ್ವದ ಕಡೆಗೆ ನಂಬಿಕೆ, 21 ನೇ ಶತಮಾನವನ್ನು ಸಶಕ್ತಗೊಳಿಸುವ ತಂತ್ರಜ್ಞಾನ ಮತ್ತು ನಮ್ಮ ಭಾರತೀಯರ ಪ್ರತಿಭೆ ಮತ್ತು ಮನೋಧರ್ಮವನ್ನು ಒಳಗೊಂಡಿದೆ’ ಎಂದು ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ರದ್ದಾಗಿದ್ದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯನ್ನು ಈ ವರ್ಷದ ಬೇಸಿಗೆಗೆ ಮುಂದೂಡಲಾಗಿತ್ತು.
ಮೋದಿ ಹೇಳಿಕೆಯ ಮುಖ್ಯಾಂಶಗಳು
*ನಾವು ಕೊರೊನಾ ಸಮಯವನ್ನು ಸುಧಾರಣೆಗಳಿಗಾಗಿ ಬಳಸಿದ್ದೇವೆ.
*ಭಾರತ ವಿಶ್ವಕ್ಕೆ ಭರವಸೆಯ ಹೂಗುಚ್ಛ ನೀಡಿದೆ. ಈ ಗುಚ್ಛದಲ್ಲಿ ನಮಗೆ ಅಚಲವಾದ ನಂಬಿಕೆಯಿದೆ.
* ನಾವು ಸರಿಯಾದ ದಿಕ್ಕಿನಲ್ಲಿ ಸುಧಾರಣೆಗಳತ್ತ ಗಮನಹರಿಸಿದ್ದೇವೆ. ಜಾಗತಿಕ ಆರ್ಥಿಕ ತಜ್ಞರು ಭಾರತದ ನಿರ್ಧಾರಗಳನ್ನು ಶ್ಲಾಘಿಸಿದ್ದಾರೆ ಮತ್ತು ನಾವು ಭಾರತದಿಂದ ವಿಶ್ವದ ಆಕಾಂಕ್ಷೆಗಳನ್ನು ಪೂರೈಸುತ್ತೇವೆ ಎಂದು ನಾನು ಖಚಿತವಾಗಿ ಹೇಳುತ್ತೇನೆ.
* ಕೇವಲ ಒಂದು ವರ್ಷದಲ್ಲಿ, ಭಾರತವು ಸುಮಾರು 160 ಕೋಟಿ ಕೋವಿಡ್ ಲಸಿಕೆ ಡೋಸ್ಗಳನ್ನು ನೀಡಿದೆ. ಪ್ರಜಾಪ್ರಭುತ್ವದ ಭಾರತವು ಇಡೀ ಜಗತ್ತಿಗೆ ಭರವಸೆಯ ಹೂಗುಚ್ಛವನ್ನು ನೀಡಿದೆ. ಪ್ರಜಾಪ್ರಭುತ್ವದ ಕಡೆಗೆ ನಂಬಿಕೆ, 21 ನೇ ಶತಮಾನವನ್ನು ಸಶಕ್ತಗೊಳಿಸುವ ತಂತ್ರಜ್ಞಾನ ಮತ್ತು ನಮ್ಮ ಭಾರತೀಯರ ಪ್ರತಿಭೆ ಮತ್ತು ಮನೋಧರ್ಮವನ್ನು ಈ ಹೂಗುಚ್ಛ ಒಳಗೊಂಡಿದೆ.
* ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಂಡು ಭಾರತವು ಸಂಪೂರ್ಣ ಜಾಗರೂಕತೆ ಮತ್ತು ಎಚ್ಚರಿಕೆಯೊಂದಿಗೆ ಮತ್ತೊಂದು ಕೋವಿಡ್-19 ಅಲೆ ವಿರುದ್ಧ ಹೋರಾಡುತ್ತಿದೆ.
In 2014, there were a few hundred registered startups in India. Today their number has crossed 60 thousand with above 10 thousand of them registered in the last 6 months. More than 50 lakh software developers are working in the country today: Prime Minister Narendra Modi pic.twitter.com/BBMrrI6CF0
— ANI (@ANI) January 17, 2022
*ಕೋವಿಡ್ ಕಾಲದಲ್ಲಿ ವಿವಿಧ ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಕಳುಹಿಸುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಲು ಸಹಾಯ ಮಾಡಿದ ಭಾರತದ ಒಂದು ಭೂಮಿ, ಒಂದು ಆರೋಗ್ಯದ ಭಾರತದ ದೃಷ್ಟಿಕೋನವನ್ನು ನಾವು ನೋಡಿದ್ದೇವೆ. ಭಾರತ ಇಂದು ವಿಶ್ವದ ಔಷಧಾಲಯವಾಗಿದೆ. ವೈದ್ಯರು ತಮ್ಮ ಕರುಣಾಮಯಿ ಗುಣದ ಮೂಲಕ ಎಲ್ಲರ ವಿಶ್ವಾಸವನ್ನು ಗಳಿಸುತ್ತಿರುವ ದೇಶ ಇದು.
*ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಐಟಿ ವಲಯವು ಹಗಲಿರುಳು ಕೆಲಸ ಮಾಡಿದೆ. ಭಾರತ ಈಗ ವಿಶ್ವಕ್ಕೆ ದಾಖಲೆ ಸಂಖ್ಯೆಯ ಸಾಫ್ಟ್ವೇರ್ ವೃತ್ತಿಪರರನ್ನು ಕೊಡುಗೆಯಾಗಿ ನೀಡುತ್ತಿದೆ. ಭಾರತವು ವಿಶ್ವದ ಮೂರನೇ ಅತಿ ಹೆಚ್ಚು ಯುನಿಕಾರ್ನ್ಗಳನ್ನು ಹೊಂದಿರುವ ದೇಶವಾಗಿದೆ.
*ಕಳೆದ ವರ್ಷ, ಭಾರತವು ಅಭಿವೃದ್ಧಿಪಡಿಸಿದ ಮತ್ತು ಅಳವಡಿಸಿಕೊಂಡ ಡಿಜಿಟಲ್ ಮೂಲಸೌಕರ್ಯವು ದೇಶದ ದೊಡ್ಡ ಶಕ್ತಿಯಾಗಿದೆ. ಆರೋಗ್ಯ ಸೇತು ಅಪ್ಲಿಕೇಶನ್ ಮತ್ತು ಕೋವಿನ್ ಪೋರ್ಟಲ್ ಭಾರತದ ಹೆಮ್ಮೆಯ ಮೂಲವಾಗಿದೆ. ಲೈಸೆನ್ಸ್ ರಾಜ್ ಎಂದು ಭಾರತವು ಹೆಸರಾಗಿದ್ದ ಕಾಲವೊಂದಿತ್ತು. ಭಾರತದ ಉದ್ಯಮಗಳಿಗೆ ಇರುವ ಸವಾಲುಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾವು ಆ ಸವಾಲುಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದ್ದೇವೆ.
*ಭಾರತೀಯರ ಉದ್ಯಮಶೀಲ ಮನೋಭಾವ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯ, ನಮ್ಮ ಪ್ರತಿ ಜಾಗತಿಕ ಪಾಲುದಾರರಿಗೆ ಹೊಸ ಶಕ್ತಿಯನ್ನು ನೀಡಬಹುದು. ಹಾಗಾಗಿ ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ.
*ಭಾರತೀಯ ಯುವಕರಲ್ಲಿ ಉದ್ಯಮಶೀಲತೆ ಇಂದು ಉತ್ತುಂಗದಲ್ಲಿದೆ. 2014 ರಲ್ಲಿ ಭಾರತದಲ್ಲಿ ಕೆಲವೇ ಕೆಲವು ನೋಂದಾಯಿತ ಸ್ಟಾರ್ಟಪ್ಗಳು ಇದ್ದವು. ಆದರೆ ಈಗ ಆ ಸಂಖ್ಯೆ 60 ಸಾವಿರ ದಾಟಿದೆ. ದೇಶದಲ್ಲಿ 80ಕ್ಕೂ ಹೆಚ್ಚು ಯುನಿಕಾರ್ನ್ಗಳನ್ನು ಸಹ ಹೊಂದಿದೆ. ಅದರಲ್ಲಿ 40 ಕ್ಕೂ ಹೆಚ್ಚು 2021ರಲ್ಲಿ ಸ್ಥಾಪನೆಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.