ಶ್ರೀನಗರ: ನಗರದ ಖನ್ಯಾರ್ ಪ್ರದೇಶದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಹತ್ಯೆಯ ಹಿಂದೆ ಇರುವವರನ್ನು ಗುರುತಿಸಲಾಗಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಭಾನುವಾರ ತಿಳಿಸಿದ್ದಾರೆ.
'ಯುವ ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ಹತ್ಯೆ ಅತ್ಯಂತ ದುರಂತ ಘಟನೆ. ಕರ್ತವ್ಯದಲ್ಲಿದ್ದ ಒಬ್ಬ ಧೈರ್ಯಶಾಲಿ ಯುವ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರು ಪೋಲಿಸರ ಸೂಕ್ಷ್ಮತೆಗಳನ್ನು ಕಲಿಯುತ್ತಿದ್ದರು. ಆರೋಪಿಯ ಮೇಲೆ ನಿಗಾವಹಿಸಲೆಂದು ಅವರನ್ನು ಆಸ್ಪತ್ರೆಗೆ ನಿಯೋಜಿಸಲಾಗಿತ್ತು. ಆಸ್ಪತ್ರೆಯಿಂದ ಹಿಂತಿರುಗುವಾಗ ಅವರಿಗೆ ಗುಂಡು ಹಾರಿಸಲಾಗಿದೆ' ಎಂದು ತಿಳಿಸಿದ್ದಾರೆ.
'ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ದುರದೃಷ್ಟವಶಾತ್, ಅವರು ಮೃತಪಟ್ಟರು. ಇದು ನಮಗೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತೇವೆ' ಎಂದು ಡಿಜಿಪಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧಿಗಳನ್ನು ಗುರುತಿಸಲಾಗಿದೆ ಮತ್ತು ಅವರನ್ನು ಶೀಘ್ರವೇ ಬಂಧಿಸಲಾಗುವುದು. ಪೊಲೀಸರೇ ಆಗಿರಲಿ, ನಾಗರಿಕರೇ ಆಗಿರಲಿ ಅಥವಾ ಭದ್ರತಾ ಪಡೆ ಸಿಬ್ಬಂದಿಯೇ ಆಗಿರಲಿ ಕಳೆದುಹೋದ ಪ್ರತಿಯೊಂದು ಜೀವವು ನಮಗೆ ಮುಖ್ಯವಾಗಿರುತ್ತದೆ. ಪ್ರಕರಣ ಬೇಧಿಸಲು ನಮ್ಮ ತನಿಖಾ ಸಂಸ್ಥೆಗಳು, ನಮ್ಮ ಕಾರ್ಯಾಚರಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಅದು ಸಾಧ್ಯವಾಗಲಿದೆ' ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ನಡೆದ ದಾಳಿಯ ಬಗ್ಗೆ ಕೇಳಿದಾಗ, ನಾಗರಿಕರು ಅಥವಾ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಇಂತಹ ಹತ್ತಾರು ಮಾದರಿಗಳನ್ನು ಈಗಾಗಲೇ ತಟಸ್ಥಗೊಳಿಸಲಾಗಿದೆ. ಆದರೆ, ಹೊಸ ಮಾದರಿಯನ್ನು ತಟಸ್ಥಗೊಳಿಸುವ ಪ್ರಯತ್ನಕ್ಕೆ ಸಮಯ ಬೇಕಾಗುತ್ತದೆ ಎಂದು ಹೇಳಿದರು.
ಹಳೆಯ ತಂಡಗಳನ್ನು ಅಳಿಸಿಹಾಕಿದಾಗಲೆಲ್ಲಾ ಅವರ ಸ್ಥಾನಕ್ಕೆ ಹೊಸ ತಂಡಗಳು ಪ್ರಯತ್ನಿಸುತ್ತವೆ. ಹೊಸ ತಂಡವನ್ನು ಗುರುತಿಸಲಾಗಿದ್ದು, ಶೀಘ್ರವೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.