ಮುಂಬೈ: ನಗರಗಳಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ವಿನೂತನ ಕ್ರಮವಾಗಿ 50 ವರ್ಷ ಹಳೆಯದಾದ ಮರಗಳಿಗೆ ಪಾರಂಪರಿಕ ಸ್ಥಾನಮಾನ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಪಾರಂಪರಿಕ ಮರಗಳು ಕಲ್ಪನೆಯನ್ನು ಸಾಕಾರಗೊಳಿಸಲು 1975ರ ಮಹಾರಾಷ್ಟ್ರ (ನಗರ ಪ್ರದೇಶ) ಮರಗಳ ಉಳಿವು ಮತ್ತು ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ‘ಮಹಾರಾಷ್ಟ್ರ ಮರಗಳ ಪ್ರಾಧಿಕಾರ’ವನ್ನು ರಚಿಸುವ ಪ್ರಸ್ತಾವಕ್ಕೂ ಅನುಮೋದನೆಯನ್ನು ನೀಡಿತು.
ಪರಿಸರ ಪ್ರೇಮಿ ಮತ್ತು ಛಾಯಾಗ್ರಾಹಕರೂ ಆಗಿರುವ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ, ಪರಿಸರ ಸಚಿವ ಆದಿತ್ಯ ಠಾಕ್ರೆ ಈ ತಿದ್ದುಪಡಿ ಕುರಿತಂತೆ ಪ್ರಮುಖವಾದ ಪಾತ್ರವಹಿಸಿದ್ದಾರೆ.
ರಾಜ್ಯದಲ್ಲಿ ನಗರ ಪ್ರದೇಶಗಳನ್ನು ಹಸಿರೀಕರಣ ಮಾಡುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತಲಾಗಿದೆ. ಇದರಿಂದ ನಾವು ನಗರ ಪ್ರದೇಶದಲ್ಲಿ ಇರುವ ಹಳೆಯ ಮರಗಳನ್ನು ರಕ್ಷಿಸುವುದು ಸಾಧ್ಯವಾಗಲಿದೆ ಎಂದು ಸಚಿವ ಆದಿತ್ಯ ಠಾಕ್ರೆ ತಿಳಿಸಿದರು.