ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್)ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷದ ನಾಯಕರು, ಸಂಸದರು, ಸಚಿವರು, ಶಾಸಕರುಗಳುಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.
ಕೆಸಿಆರ್ ಅಧಿಕಾರಕ್ಕೆ ಬಂದ ಬಳಿಕ ದೇಶದ ರಾಜಧಾನಿ ದೆಹಲಿಯಲ್ಲಿ ಮೊದಲ ಬಾರಿಗೆ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. 2014ರಲ್ಲಿ ಕೆಸಿಆರ್ ತೆಲಂಗಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ರಾಜ್ಯದಿಂದ 15 ಲಕ್ಷ ಟನ್ ಅಕ್ಕಿಖರೀದಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಟಿಆರ್ಎಸ್ ನಾಯಕರುಧರಣಿ ಆರಂಭಿಸಿದ್ದಾರೆ. ಕೆಸಿಆರ್ ಸೇರಿದಂತೆ ಪಕ್ಷದ ಸಂಸದರು, ಸಚಿವರು, ಶಾಸಕರು, ಪಾಲಿಕೆ, ನಗರಸಭೆ ಸದಸ್ಯರುಗಳು ಈ ಧರಣಿಯಲ್ಲಿ ಭಾಗವಹಿಸಿದ್ದಾರೆ.
ದೆಹಲಿಯ ತೆಲಂಗಾಣ ಭವನದ ಎದುರು ಪ್ರತಿಭಟನೆ ನಡೆಯುತ್ತಿದ್ದು ಟಿಆರ್ಎಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಸಹ ಧರಣಿಯಲ್ಲಿ ಭಾಗವಹಿಸಿದ್ದಾರೆ. ಒಂದು ದಿನ ಮಾತ್ರ ಧರಣಿ ನಡೆಯಲಿದೆ ಎಂದು ಟಿಆರ್ಎಸ್ ಸಂಸದ ರಂಜಿತ್ ರೆಡ್ಡಿ ಹೇಳಿದ್ದಾರೆ.
ಹಿಂಗಾರಿನಲ್ಲಿ ರೈತರ ಬೆಳದ ಅಕ್ಕಿಯನ್ನು ಖರೀದಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದ್ದು ಕೂಡಲೇ ಕೇಂದ್ರ ಸರ್ಕಾರ ಸುಮಾರು 15 ಲಕ್ಷ ಟನ್ ಅಕ್ಕಿ ಖರೀದಿ ಮಾಡಬೇಕು ಎಂದು ಆಗ್ರಹಿಸಿ ಕೆಸಿಆರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ರಂಜಿತ್ ರೆಡ್ಡಿ ತಿಳಿಸಿದ್ದಾರೆ.
ಧರಣಿ ಸ್ಥಳಕ್ಕೆ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಆಗಮಿಸಿ ಕೆಸಿಆರ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ರಂಜಿತ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿತೆಲಂಗಾಣದ ಅಕ್ಕಿಯನ್ನು ಖರೀದಿ ಮಾಡಬೇಕು ಎಂದು ರಂಜಿತ್ ರೆಡ್ಡಿಆಗ್ರಹಿಸಿದ್ದಾರೆ.
ತೆಲಂಗಾಣ ಭವನದ ಸುತ್ತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.