ಉನ್ನಾವ್:ಇಲ್ಲಿನ ಸಬ್ಇನ್ಸ್ಪೆಕ್ಟರ್ (ಎಸ್ಐ) ಒಬ್ಬರುಲಂಚ ಸ್ವೀಕರಿಸುವುದನ್ನು ಸಮರ್ಥಿಸಿಕೊಂಡಿರುವ ವಿಡಿಯೊ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.
ಬಿಘಾಪುರ ಪೊಲೀಸ್ ಠಾಣೆಯ ಎಸ್ಐ ಉಮೇಶ್ ತ್ರಿಪಾಠಿ ಅವರು,'ಪೊಲೀಸರು ಹಣ ತೆಗೆದುಕೊಂಡರೆ, ಅದೂ (ಹಣವೂ) ಕೆಲಸ ಮಾಡುತ್ತದೆ. ಬೇರೆ ಇಲಾಖೆಗಳಿಗೆ ಹೋಗಿ, ಅವರು ಹಣ ತೆಗೆದುಕೊಳ್ಳುತ್ತಾರೆ ಆದರೆ ಕೆಲಸ ಮಾಡುವುದಿಲ್ಲ' ಎಂದು ಹೇಳಿದ್ದಾರೆ. ಈ ವಿಡಿಯೊ ಇದೀಗ ವೈರಲ್ ಆಗಿದೆ.
ಸ್ಥಳೀಯ ಶಾಲೆಯೊಂದರಲ್ಲಿ ನವೆಂಬರ್ 29ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು.
'ಪೊಲೀಸ್ ಇಲಾಖೆಗಿಂತ ಉತ್ತಮವಾದ ಮತ್ತೊಂದು ಇಲಾಖೆ ಇಲ್ಲ. ಶಿಕ್ಷಕರತ್ತ ನೋಡಿ, ಅವರು ಮನೆಯಿಂದಲೇ ಪಾಠ ಮಾಡುತ್ತಿದ್ದಾರೆ. ಆರು ತಿಂಗಳಿನಿಂದ ಮನೆಗಳಲ್ಲಿ ರಜೆಯಲ್ಲಿ ಉಳಿದಿದ್ದಾರೆ. ಮತ್ತೆ ಕೋವಿಡ್ ಬಂದರೆ, ಅವರು ಶಾಲೆಗಳಿಗೆ ಹೋಗುವುದೇ ಇಲ್ಲ' ಎಂದೂ ಹೇಳಿದ್ದಾರೆ.
ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಶಾಹಿ ಶೇಖರ್ ಸಿಂಗ್, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಬಿಘಾಪುರ ವೃತ್ತಾಧಿಕಾರಿಗೆ ತನಿಖೆಯ ಹೊಣೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.