ಮುಜಫ್ಫರ್ನಗರ: ತಮ್ಮ ವರದಕ್ಷಿಣೆಯ ಬೇಡಿಕೆಯನ್ನು ಈಡೇರಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಆಕೆಯ ಅತ್ತೆಯ ಮನೆಯವರು ವಿಷವುಣಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.
‘ಈ ಘಟನೆಯು ಜಿಲ್ಲೆಯ ಅಜಾದ್ ಚೌಕ್ನಲ್ಲಿ ನಡೆದಿದ್ದು, ಈ ಸಂಬಂಧ ಮಹಿಳೆಯ ಗಂಡ ಮತ್ತು ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಸಂತ್ರಸ್ತೆ ಮುಸ್ಕಾನ್ ಅವರು ಕಾಸಿಫ್ ಎಂಬಾತನನ್ನು ಮೇ ತಿಂಗಳಲ್ಲಿ ಮದುವೆಯಾಗಿದ್ದರು’ ಎಂದು ಅವರು ಹೇಳಿದರು.
‘ಹಲವು ತಿಂಗಳಿನಿಂದ ಕಾಸಿಫ್ ವರದಕ್ಷಿಣೆಗಾಗಿ ಮುಸ್ಕಾನ್ಗೆ ಕಿರುಕುಳ ನೀಡುತ್ತಿದ್ದ. ಬಳಿಕ ಅತ್ತೆಯ ಮನೆಯವರು ಆಕೆಗೆ ವಿಷವುಣಿಸಿ ಕೊಂದಿದ್ದಾರೆ’ ಎಂದು ಮುಸ್ಕಾನ್ ಕುಟುಂಬದವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.