ಇಂದೋರ್: ಯೋಗ ಕುರಿತು ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು, ‘ಓಂ ಎಂದು ಪಠಣ ಮಾಡುವುದರಿಂದಾಗಿ ಯೋಗದ ಶಕ್ತಿ ಹೆಚ್ಚಾಗದು, ಅಂತೆಯೇ, ಅಲ್ಲಾಹ್ ಎನ್ನುವ ಮೂಲಕ ಯೋಗದ ಶಕ್ತಿ ಕಡಿಮೆಯಾಗುವುದೂ ಇಲ್ಲ’ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಅವರು, ‘ಕೆಲವು ಸಣ್ಣ ನಾಯಕರು ಟೀಕೆ ಮಾಡಿದಾಕ್ಷಣ ಯೋಗದ ಹಿರಿಮೆ ಕಡಿಮೆಯಾಗುವುದಿಲ್ಲ’ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಕೆಲವು ವಿಷಯಗಳ ಬಗ್ಗೆ ರಾಜಕೀಯ ಮಾಡುವ ಮೂಲಕ ಸಂಕುಚಿತ ಮನಃಸ್ಥಿತಿ ಪ್ರದರ್ಶಿಸುವುದು ಸೂಕ್ತವಲ್ಲ’ ಎಂದೂ ಅವರು ಹೇಳಿದ್ದಾರೆ.
‘ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಒಂದು ಕರೆಯಿಂದಾಗಿ ಇಡೀ ವಿಶ್ವವೇ ಯೋಗ ದಿನವನ್ನು ಆಚರಿಸುತ್ತಿದೆ. ಅಂಥದ್ದರ ನಡುವೆ ಇಂಥ ಸಣ್ಣ ನಾಯಕರ ಟ್ವೀಟ್ನಿಂದಾಗಿ ಯೋಗದ ಹಿರಿಮೆ ಕಡಿಮೆಯಾಗುವುದಿಲ್ಲ’ ಎಂದಿದ್ದಾರೆ.
ಇದಕ್ಕೂ ಮುನ್ನ ಇಂದೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಜಯ ವರ್ಗೀಸ್ ಅವರು ಯೋಗಾಭ್ಯಾಸ ಮಾಡಿದರು. ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಸೆಂಟ್ರಲ್ ಸ್ಕೂಲ್ ಆಫ್ ವೆಪನ್ಸ್ ಅಂಡ್ ಟ್ಯಾಕ್ಟಿಕ್ಸ್ (ಸಿಎಸ್ಡಬ್ಲ್ಯುಟಿ) ಆಯೋಜಿಸಿದ್ದ ಯೋಗ ದಿನದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಜಲಸಂಪನ್ಮೂಲ ಸಚಿವ ತುಳಸೀರಾಂ ಸಿಲಾವತ್ ಅವರು ಯೋಗಾಭ್ಯಾಸ ಮಾಡಿದರು.