ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಾಮ್ ನೆನಪಿನ ಐವಾನ್‌ –ಎ–ಶಾಹಿ

ಹೈದ್ರಾಬಾದ್ ಕರ್ನಾಟಕಕ್ಕೆ ನಿಜಾಮರ ಕೊಡುಗೆ
Last Updated 20 ಜನವರಿ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ ನಗರದ ಬಗ್ಗೆ ಗೊತ್ತಿರುವವರಿಗೆ ಐವಾನ್‌ ಶಾಹಿ ಅತಿಥಿಗೃಹದ ಪರಿಚಯವಿದ್ದೇ ಇರುತ್ತದೆ. ಅದು ಮಂತ್ರಿ–ಮಹೋದಯರ ವಿಶ್ರಾಂತಿಯ ತಾಣ. ವಿಶಿಷ್ಟ ವಾಸ್ತುಶಿಲ್ಪ, ವಿನ್ಯಾಸವಿರುವ ಈ ಕಟ್ಟಡ ನೋಡಿದವರನ್ನು ಥಟ್ಟನೆ ಸೆಳೆಯುತ್ತದೆ. ಅಷ್ಟೇ ಅಲ್ಲ, ಆ ಕಟ್ಟಡದ ಇತಿಹಾಸವೂ ಅಷ್ಟೇ ವಿಶಿಷ್ಟವಾಗಿದೆ.

ಕಲಬುರ್ಗಿ ಪ್ರದೇಶವನ್ನು ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ಬಹಮನಿ ಸುಲ್ತಾನರಂತಹ ಅನೇಕ ರಾಜಮನೆತನಗಳು ಆಳಿ ಹೋಗಿವೆ. ಆಯಾ ರಾಜರು ತಮ್ಮ ತಮ್ಮ ಆಡಳಿತಾವಧಿಯಲ್ಲಿ ಸುಂದರ ಕೋಟೆಗಳನ್ನು ಕಟ್ಟಿಸಿದ್ದಾರೆ. ಅವೆಲ್ಲ ಈಗ ಐತಿಹಾಸಿಕ ಸ್ಮಾರಕಗಳಾಗಿವೆ. ಇಂಥವುಗಳ ಸಾಲಿಗೆ ಸೇರುವ ಕಟ್ಟಡವೇ 19ನೇ ಶತಮಾನದಲ್ಲಿ ನಿರ್ಮಾಣವಾದ, ಈಗ ಸರ್ಕಾರಿ ಅತಿಥಿಗೃಹವಾಗಿರುವ ‘ಐವಾನ್‌ ಶಾಹಿ’ ಕಟ್ಟಡ. ಮೂಲದಲ್ಲಿ ಇದು ಐವಾನ್‌–ಎ–ಶಾಹಿ ಅರಮನೆ.

ನಿಜಾಮರ ಆಳ್ವಿಕೆಯ 7ನೇ ಹಾಗೂ ಕೊನೆಯ ನಿಜಾಮ್‌ ಮೀರ್ ಉಸ್ಮಾನ್ ಅಲಿ ಖಾನ್ ಬಹದ್ದೂರ್ ಅಸೀಫ್ ಜಾಹಿ ನಿರ್ಮಿಸಿರುವ ಕಟ್ಟಡವಿದು. 1911ರಿಂದ 1948 ರವರೆಗೆ ಹೈದರಾಬಾದ್ ಸಂಸ್ಥಾನವನ್ನು ಆಳ್ವಿಕೆ ನಡೆಸುವಾಗ ಈ ಕಟ್ಟಡ ನಿಜಾಮರ ಅರಮನೆಯಾಗಿತ್ತು. ನಂತರ ಭಾರತ ಸರ್ಕಾರದಲ್ಲಿ ವಿಲೀನಗೊಂಡಿತು. ಜನ ಈಗ ಕಟ್ಟಡವನ್ನು ಐವಾನ್ ಶಾಹಿ ಅತಿಥಿಗೃಹ ಎಂದೇ ಗುರುತಿಸುತ್ತಾರೆ. ಇದು ಕಲಬುರ್ಗಿ ನಗರದ ರೈಲು ನಿಲ್ದಾಣದಿಂದ ಅರ್ಧ ಕಿ.ಮೀ. ಅಂತರದಲ್ಲಿದೆ.

ವಿಶಿಷ್ಟ ವಾಸ್ತುಶಿಲ್ಪ ವಿನ್ಯಾಸ

ಈ ಅರಮನೆ ಆವರಣ ಪ್ರವೇಶಿಸಿದೊಡನೆ ಸುಂದರ ವಿಶಾಲವಾದ ಕಮಾನುಗಳುಳ್ಳ ಕಟ್ಟಡವಿದೆ. ಇದೇ ದಿವಾನ್–ಎ-ಆಮ್ ಅಥವಾ ಸಮಾ ಖಾನಾ. ಇದು ಆ ಕಾಲದಲ್ಲಿ ಜನರು ತಮ್ಮ ಕುಂದು ಕೊರತೆಗಳನ್ನು ಆಲಿಸಲು, ಮೀಸಲಿಟ್ಟ ಕಟ್ಟಡ.

ಅರಮನೆಯನ್ನು ಶಹಾಬಾದ್ ಫರ್ಸಿ ಕಲ್ಲುಗಳಿಂದ ಕಟ್ಟಲಾಗಿದೆ. ಇವತ್ತಿಗೂ ಈ ಭಾಗದಲ್ಲಿ ಶಹಾಬಾದ್ ಫರ್ಸಿ ಕಲ್ಲುಗಳು ಜನಪ್ರಿಯ. ಇದಕ್ಕೆ ಬಿಳಿ ಹಾಗೂ ಕಂದು ಬಣ್ಣದ ಕಲ್ಲುಗಳನ್ನು ಅಲಂಕಾರಿಕವಾಗಿ ಬಳಸಲಾಗಿದೆ. ಇಪ್ಪತ್ತು ಅಡಿಗೂ ಹೆಚ್ಚು ಎತ್ತರವಿರುವ ಕಟ್ಟಡದಲ್ಲಿ, ಒಳಗಡೆ ಸಣ್ಣ ಕಿಂಡಿಯಂತಹ ಕಿಟಕಿಗಳಿವೆ. ಇದರಿಂದಾಗಿ ಈ ಕಟ್ಟಡ ಒಂದು ರೀತಿ ಹವಾ ನಿಯಂತ್ರಿತವಾಗಿದೆ. ಬೇಸಿಗೆಯಲ್ಲೂ ಒಳಗಡೆ ತಣ್ಣನೆಯ ತಾಪಮಾನವಿರುತ್ತದೆ.

ಉತ್ತರ ಕರ್ನಾಟಕದ ಇಂಡೋ-ಇಸ್ಲಾಮಿಕ್ ಕಲೆಯ ಸಂಶೋಧಕ ಡಾ. ರೆಹಮಾನ್ ಪಟೇಲ್ ಅವರ ಪ್ರಕಾರ ಈ ಕಟ್ಟಡದ ಮುಂಭಾಗ ಗೋಥಿಕ್ ಶೈಲಿಯಲ್ಲಿದೆ. ಪಕ್ಕದ ಗೋಡೆಗಳನ್ನು ಅಂಕುಡೊಂಕಾದ (ಜಿಗ್ ಜಾಗ್) ಮಾದರಿಯಲ್ಲಿ ನಿರ್ಮಿಸಿರುವುದು ವಿಶೇಷ. ಅಲಂಕಾರಿಕ ಕಿಟಕಿಗಳು, ಕಮಾನುಗಳು ಮತ್ತು ದೊಡ್ಡ ಬಾಗಿಲುಗಳು ನೋಡುಗರನ್ನು ಸೆಳೆಯುತ್ತವೆ. ವಿಶ್ರಾಂತಿ ಕೋಣೆಗಳು, ಅಡುಗೆಮನೆ, ಸ್ನಾನ ಗೃಹಗಳು, ವಿಶಾಲವಾದ ಪ್ರಾಂಗಣ ಮತ್ತು ಅಲ್ಲದೇ ದಿವಾನ್-ಎ-ಖಾಸ್ ಇದು ವಿಶೇಷ ಅತಿಥಿಗಳಿಗಾಗಿ ಕೋಣೆಗಳನ್ನು ಒಳಗೊಂಡಿದೆ. ಪ್ರತಿ ಕೋಣೆಗಳ ನಿರ್ಮಾಣಕ್ಕೆ ಹೆಚ್ಚಾಗಿ ಸಾಗುವಾನಿ ಮರಮುಟ್ಟು ಬಳಸಲಾಗಿದೆ. ಇಲ್ಲಿನ ಕೆತ್ತನೆಯ ಸೌಂದರ್ಯ ಅಂದಿನ ಕುಶಲ ಕರ್ಮಿಗಳ ಕೈ ಚಳಕಕ್ಕೆ ಸಾಕ್ಷಿ.

ಕಟ್ಟಡದ ಸುತ್ತಲೂ ಸುಂದರವಾದ ಉದ್ಯಾನವಿದೆ. ವಿಶಿಷ್ಟ ರೀತಿಯ ಗಿಡಮರಗಳಿವೆ. ಬಣ್ಣ ಬಣ್ಣದ ಹೂವಿನ ಗಿಡಗಳೂ ಇವೆ. ಕಲಬುರ್ಗಿಯಲ್ಲಿ ಇಂಥ ಅನೇಕ ಕಟ್ಟಡಗಳಿವೆ. ಅದರಲ್ಲಿ ಕೆಲವು ಕಟ್ಟಡಗಳಲ್ಲಿ ಇಂದಿನ ಆಡಳಿತ ಕೇಂದ್ರವಾಗಿರುವ ವಿಕಾಸ ಭವನ (ಮಿನಿ ವಿಧಾನಸೌಧ) ಮುಂಭಾಗದ ದ್ವಾರ ಬಾಗಿಲು, ತಹಶೀಲ್ದಾರ ಕಚೇರಿ, ಜಿಲ್ಲಾ ಪಂಚಾಯ್ತಿ ಕಟ್ಟಡ, ಸೂಪರ್ ಮಾರ್ಕೆಟ್‍ನಲ್ಲಿರುವ ಹಳೇ ಸೆರೆಮನೆ, ಕೇಂದ್ರ ಗ್ರಂಥಾಲಯ, ಎಂ.ಪಿ.ಎಚ್.ಎಸ್ ಶಾಲೆ ಹಾಗೂ ಮೆಹಬೂಬ್ ಗುಲ್ಶನ್ ಉದ್ಯಾನವಿದೆ. ಈ ಪುರಾತನ ಕಟ್ಟಡಗಳ ಪಟ್ಟಿಗೆ ದೇಶಮುಖ, ದೇಶಪಾಂಡೆಯವರ ವಾಡೆಗಳನ್ನೂ ಹೆಸರಿಸಬಹುದು.

ಉಸ್ಮಾನ್ ಆಳ್ವಿಕೆಯಲ್ಲಿ ಅನೇಕ ಕೆರೆಗಳು, ಉದ್ಯಾನಗಳು ನಿರ್ಮಾಣವಾಗಿವೆ. ಅದರಲ್ಲಿ ನಗರದ ಹೃದಯ ಭಾಗದಲ್ಲಿ
ರುವ ಮೆಹಬೂಬ್ ಗುಲ್ಶನ್ ಉದ್ಯಾನ ಹಾಗೂ ಮೆಹಬೂಬ್ ಸಾಗರ (ಇಂದಿನ ಶರಣ ಬಸವೇಶ್ವರ ಕೆರೆ) ಜನಪ್ರಿಯವಾಗಿವೆ.

ಕಲಬುರ್ಗಿ ನಗರದ ಐವಾನ್-ಎ-ಶಾಹಿ ಅರಮನೆ ಹೈದರಾಬಾದ್ ಕರ್ನಾಟಕದಲ್ಲಿ ಸುಸ್ಥಿತಿಯಲ್ಲಿರುವ ಏಕೈಕ ಅರಮನೆ. ಆದರೆ ಇದನ್ನು ಕೇವಲ ಒಂದು ಅತಿಥಿ ಗೃಹವಾಗಿ ಬಳಕೆ ಮಾಡುತ್ತಿರುವುದು ವಿಷಾದನೀಯ.

ಇದನ್ನು ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವ ವಸ್ತು ಸಂಗ್ರಹಾಲಯವಾಗಿ ಅಥವಾ ಸಂರಕ್ಷಿತ ಸ್ಮಾರಕವಾಗಿ ಅಭಿವೃದ್ಧಿ ಪಡಿಸಿದರೆ ನಿಜಾಮರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

ಅಭಿವೃದ್ಧಿಯ ಉಸ್ಮಾನ್

ಮೀರ್ ಉಸ್ಮಾನ್ ಅಲಿ, ಆ ಕಾಲದ ಜಗತ್ತಿನ ಅತ್ಯಂತ ಶ್ರೀಮಂತ ರಾಜರಲ್ಲಿ ಒಬ್ಬರು. ತನ್ನ ಆಳ್ವಿಕೆಯಲ್ಲಿ ಬೆಳ್ಳಿ ಹಾಗೂ ಇತರೆ ಲೋಹಗಳ ನಾಣ್ಯಗಳು, ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಕಾಗದದ ನೋಟುಗಳನ್ನು ಚಲಾವಣೆಗೆ ತಂದಿದ್ದವರು. ಆ ನೋಟುಗಳು ‘ರೂಪಿಯಾ ಸಿಕ್ಕಾ ಉಸ್ಮಾನಿಯಾ’ ಎಂದೇ ಹೆಸರಾಗಿದ್ದವು.

‌ಉಸ್ಮಾನ್ ತಂದೆ ಮೀರ್ ಮಹಬೂಬ್ ಅಲಿ ಖಾನ್ ಬಹದ್ದೂರ್‌. ಇವರ ನಿಧನದ ನಂತರ 25ನೇ ವಯಸ್ಸಿನಲ್ಲಿ ಮೀರ್ ಉಸ್ಮಾನ್ ಅಧಿಕಾರಕ್ಕೇರಿದರು. 1965ರಲ್ಲಿ ರಾಷ್ಟ್ರೀಯ ರಕ್ಷಣಾ ನಿಧಿಗೆ ಐದು ಸಾವಿರ ಕೆಜಿ ಬಂಗಾರವನ್ನು ಕೊಡುಗೆಯಾಗಿ ನೀಡಿದ್ದರು. ಇದು ಆ ಕಾಲದಲ್ಲಿ ಅತ್ಯಂತ ಬಹು ದೊಡ್ಡ ಕೊಡುಗೆಯಾಗಿತ್ತು.

ಆ ಕಾಲದಲ್ಲೇ ಹೈದರಾಬಾದ್‌ನಿಂದ ಕಲಬುರ್ಗಿಯ ಐವಾನ್‌–ಎ–ಶಾಹಿ ಅರಮನೆವರೆಗೂ ರೈಲು ಓಡಾಡುತ್ತಿತ್ತು. ‌ಇವತ್ತಿಗೂ ಕಟ್ಟಡದ ಎದುರು ರೈಲು ಹಳಿಗಳ ಗುರುತುಗಳಿವೆ.

ಕಲಬುರ್ಗಿ ನಗರಕ್ಕೆ ಶುದ್ಧ ಕುಡಿಯುವ ನೀರಿಗಾಗಿ ಅಂದು ನಿರ್ಮಿಸಿದ ಫಿಲ್ಟರ್‌ ಬೆಡ್, ಇವತ್ತಿಗೂ ಬಳಕೆಯಾಗುತ್ತಿದೆ. ಅಂದು ಉಸ್ಮಾನ್ ಮೆಹಬೂಬ್ ಶಾಹಿ ಕಪಡಾ ಮಿಲ್ (ಎಂ.ಎಸ್.ಕೆ.ಮಿಲ್) ಸ್ಥಾಪಿಸಿ, ಈ ಭಾಗದ ಜನರಿಗೆ ಉದ್ಯೋಗ ನೀಡಿದ್ದರು. ಇಲ್ಲಿಂದ ದೇಶ, ವಿದೇಶಗಳಿಗೆ ಬಟ್ಟೆ ರಫ್ತಾಗುತ್ತಿತ್ತು.

ಅಭಿವೃದ್ಧಿಯ ಜತೆಗೆ ಕಲೆ, ವಾಸ್ತುಶಿಲ್ಪಕ್ಕೆ ಕೊಡುಗೆ ನೀಡಿರುವ ಉಸ್ಮಾನ್ ಅವರನ್ನು ಆಧುನಿಕ ಹೈದರಾಬಾದ್‍ನ ವಾಸ್ತುಶಿಲ್ಪಿ ಎನ್ನುತ್ತಾರೆ. ಅಷ್ಟೇ ಅಲ್ಲ, ಬುದ್ಧ, ಚಾಲುಕ್ಯ, ಜೈನ ಹಾಗೂ ಬಹಮನಿ ಕಾಲದ ಸ್ಮಾರಕಗಳಿಗೆ ಪುನರುಜ್ಜೀವನ ಮಾಡುವ, ಅಜಂತಾ, ಎಲ್ಲೋರಾದ ಗುಹೆಗಳ ನವೀಕರಣಕ್ಕೆ ಹಣ ನೀಡುವ ಮೂಲಕ ಅಭಿವೃದ್ಧಿಯ ಜತೆಗೆ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ ಬೆಳವಣಿಗೆಗೂ ನಿಜಾಮರು ಕೊಡುಗೆ ನೀಡಿದ್ದಾರೆಂಬುದು ಇವುಗಳಿಂದ ತಿಳಿಯುತ್ತದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT