ಯಡ್ರಾಮಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಮಂಗಳೂರ ಗ್ರಾಮದಲ್ಲಿಕಳೆಗುಂದಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕ ಸದಾಶಿವ ಪತ್ತಾರ, ತಮ್ಮ ಸ್ವಂತ ಹಣ ₹ 60 ಸಾವಿರ ಭರಿಸಿ ಜೀವಕಳೆ ತಂದಿದ್ದಾರೆ. ಗ್ರಾಮಸ್ಥರಲ್ಲೂ ಅಭಿಮಾನ ಮೂಡಿಸಿದ್ದಾರೆ.
ಪಾಠ ಮಾಡುವ ಕಾಯಕಕ್ಕೆ ಸೀಮಿತಗೊಳ್ಳದ ಅವರು ಶಾಲೆ ಆವರಣದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ಗ್ರಾಮಸ್ಥರ ನೆರವಿನಿಂದ ತೆರವುಗೊಳಿಸಿದರು. ನಿತ್ಯ ಬೆಳಿಗ್ಗೆ 8ಕ್ಕೆ ಬಂದು ಪೊರಕೆ ಹಿಡಿದು ಆವರಣ ಶುಚಿಗೊಳಿಸಿ, ಎಲ್ಲರಿಗೂ ಪ್ರೇರಣೆಯಾದರು.
ಎರಡು ಕೊಠಡಿಗಳಿರುವ ಈ ಶಾಲೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲ. 1 ರಿಂದ 5ನೇ ತರಗತಿಯವರೆಗೆ 83 ವಿದ್ಯಾರ್ಥಿಗಳು ಓದುತ್ತಾರೆ. ಯಡ್ರಾಮಿಯವರಾದ ಸದಾಶಿವ ಪತ್ತಾರ ಅವರು 10 ವರ್ಷಗಳಿಂದ ಇಲ್ಲಿ ಶಿಕ್ಷಕರಾಗಿದ್ದಾರೆ.
‘ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಶಾಲೆ ಬಂದ್ ಆಗಿದ್ದರೂ ಪ್ರತಿ ದಿನ ಶಾಲೆಗೆ ಬರುವುದುಸದಾಶಿವ ಪತ್ತಾರ ತಪ್ಪಿಸಲಿಲ್ಲ. ಸಂಬಳದ ಹಣದಿಂದ ಶಾಲೆಗೆ ಸುಣ್ಣಬಣ್ಣ ಬಳಿಸಿದ್ದಾರೆ’ ಎಂದುಮುಖ್ಯಶಿಕ್ಷಕ ಪ್ರಶಾಂತ ಎಂ.ಕುನ್ನೂರ, ಗ್ರಾಮಸ್ಥರು ತಿಳಿಸಿದರು.
‘ಲಾಕ್ಡೌನ್ ಅವಧಿಯಲ್ಲಿ ಪಾಠ ಮಾಡದಿದ್ದರೂ ಸರ್ಕಾರ ನನಗೆ ವೇತನ ನೀಡಿದೆ. ಸರ್ಕಾರ ನೀಡಿದ ಹಣ ಸರ್ಕಾರಿ ಶಾಲೆಗೆ ಬಳಕೆಯಾಗಲಿ ಎಂಬ ಉದ್ದೇಶದೊಂದಿಗೆ ಈ ಕಾರ್ಯ ಕೈಗೊಂಡೆ. ಅನ್ನ ನೀಡುವ ಶಾಲೆಯತ್ತ ಕಾಳಜಿ ತೋರದಿದ್ದರೆ ಹೇಗೆ? ಉತ್ತಮ ವಾತಾವರಣದಲ್ಲಿ ಮಕ್ಕಳು ಶಿಕ್ಷಣ ಪಡೆದರೆ ಅದೇ ನನಗೆ ಖುಷಿಯ ಸಂಗತಿ’ ಎನ್ನುತ್ತಾರೆ ಸದಾಶಿವ ಪತ್ತಾರ.
* ಶಾಲೆಯ ಒಂದು ಕೋಣೆಯನ್ನು ಸ್ಮಾರ್ಟ್ಕ್ಲಾಸ್ ಆಗಿಸುವ ಕನಸಿದೆ. ಈ ಹಳೆಯ ವಿದ್ಯಾರ್ಥಿಗಳು, ದಾನಿಗಳು, ಪಂಚಾಯಿತಿ ಕೈಜೋಡಿಸಿದ್ದಲ್ಲಿ, ಕನಸು ಖಂಡಿತ ನನಸಾಗುತ್ತದೆ. –ಸದಾಶಿವ ಪತ್ತಾರ, ಶಿಕ್ಷಕ