ಹಟ್ಟಿ ಚಿನ್ನದಗಣಿ (ರಾಯಚೂರು ಜಿಲ್ಲೆ): ಲಿಂಗಸುಗೂರು ತಾಲ್ಲೂಕಿನ ಗೋಲಪಲ್ಲಿ ಬಳಿ ಶ್ರೀರಂಗಪಟ್ಟಣ–ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿಗಳ ಮಧ್ಯೆ ಕಾರು ಸಿಕ್ಕಿಕೊಂಡು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಅಣ್ಣ–ತಂಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ತಂದೆ–ತಾಯಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಕೋಳೂರ ಗ್ರಾಮದ ಹರ್ಷಿತಾ (16), ಭುವನ್ (17) ಅವರ ದೇಹಗಳು ಅಪಘಾತದ ರಭಸಕ್ಕೆ ಛಿದ್ರಗೊಂಡಿದ್ದವು.
ಹರ್ಷಿತಾ ಮತ್ತು ಭುವನ್ ದಾವಣಗೆರೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರನ್ನುಬಿಟ್ಟುಬರಲು ಪಾಲಕರು ಕಾರಿನಲ್ಲಿ ದಾವಣಗೆರೆಗೆ ತೆರಳುತ್ತಿದ್ದರು.
ಮತ್ತೊಂದು ಅಪಘಾತ: ಈ ಅಪಘಾತ ಸ್ಥಳದ ಸನಿಹವೇವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಅವರು ಪ್ರಯಾಣಿಸುತ್ತಿದ್ದ ಕಾರು ಮಗುಚಿ ಬಿದ್ದಿದೆ. ಆದರೆ, ಯಾರಿಗೂಗಾಯಗಳಾಗಿಲ್ಲ.