ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಆಯುಕ್ತರ ವಿರುದ್ಧ ಕ್ರಮ: ಪರಿಶೀಲಿಸಲು ಸೂಚನೆ

ತನಿಖಾ ಸಂಸ್ಥೆಗಳೆದುರು ಹಾಜರಾಗದಂತೆ ನಿರ್ಬಂಧ ಪ್ರಕರಣ
Last Updated 10 ನವೆಂಬರ್ 2020, 22:52 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಅನುಮತಿ ಪಡೆಯದೇ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌), ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೇರಿದಂತೆ ಯಾವುದೇ ತನಿಖಾ ಸಂಸ್ಥೆ ಎದುರು ಹಾಜರಾಗದಂತೆ ಸಿಬ್ಬಂದಿಗೆ ಆದೇಶ ಹೊರಡಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸಿ, ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.

ಬಿಡಿಎ ಆಯುಕ್ತರ ಕ್ರಮ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಎಸ್‌. ಅರುಣಾಚಲಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ, ‘ತನಿಖಾ
ಸಂಸ್ಥೆಗಳ ಕೆಲಸದಲ್ಲಿ ಅಡ್ಡಿಪಡಿಸುವ ಕೃತ್ಯವನ್ನು ಬಿಡಿಎ ಆಯುಕ್ತರು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕವೂ ಸರ್ಕಾರ ಕೈಕಟ್ಟಿ ಕೂರಲಾಗದು’ ಎಂದು ಹೇಳಿತು.

‘ಬಿಡಿಎ ಆಯುಕ್ತರ ಆದೇಶವು ತನಿಖಾ ಸಂಸ್ಥೆಗಳ ಕೆಲಸದಲ್ಲಿ ಹಸ್ತಕ್ಷೇಪ ನಡೆಸುವಂತಿದೆ. ತನಿಖೆಗೆ ಅಗತ್ಯವಿರುವ ಮಾಹಿತಿ ಮತ್ತು ದಾಖಲೆಗಳನ್ನು ತನಿಖಾ ತಂಡದ ಜತೆ ಹಂಚಿಕೊಳ್ಳುವುದನ್ನು ನಿರ್ಬಂಧಿಸುವುದಕ್ಕಾಗಿ ಈ ಆದೇಶ ಹೊರಡಿಸಲಾಗಿದೆ’
ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಬಿಡಿಎ ಆಯುಕ್ತರ ಪರ ವಕೀಲರು, ಆದೇಶದ ಇಂಗ್ಲಿಷ್‌ ಅನುವಾದಿತ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ತನಿಖಾ ಸಂಸ್ಥೆಗಳ ಎದುರು ಹಾಜರಾಗುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಆದೇಶದಲ್ಲಿ ಹೇಳಿರುವುದನ್ನು ನ್ಯಾಯಾಲಯ ಗಮನಿಸಿತು.

‘ಬಿಡಿಎ ಆಯಕ್ತರು ಯಾವ ಕಾಯ್ದೆ ಅಥವಾ ನಿಯಮಗಳ ಅಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ? ಈ ರೀತಿಯ ತಪ್ಪೆಸಗಿರುವ ಆಯುಕ್ತರ ವಿರುದ್ಧ ಬಿಡಿಎ ಕಾಯ್ದೆಯ ಅಡಿಯಲ್ಲಿ ಕ್ರಮ ಜರುಗಿಸಲು ಸರ್ಕಾರ ಸಿದ್ಧವಿದೆಯೆ’ ಎಂದು ವಿಭಾಗೀಯ ಪೀಠ ಪ್ರಶ್ನಿಸಿತು.

ಬಿಡಿಎ ಸಿಬ್ಬಂದಿ ತನಿಖಾ ಸಂಸ್ಥೆಗಳ ಎದುರು ವಿಚಾರಣೆಗೆ ಹಾಜರಾಗುವುದನ್ನು ತಡೆಯುವ ಯಾವುದೇ ಉದ್ದೇಶ ಆಯುಕ್ತರಿಗೆ ಇರಲಿಲ್ಲ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣದ ವಿಚಾರಣೆಯನ್ನು ನವೆಂಬರ್‌ 28ಕ್ಕೆ ಮುಂದೂಡಿದ ನ್ಯಾಯಾಲಯ, ಬಿಡಿಎ ಆಯುಕ್ತರ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT