ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರಿಹಾರದ ಹಣ ದುರ್ಬಳಕೆ ಆರೋಪ: ಶಿಕ್ಷಣ ಸಚಿವರಿಗೆ ಸಿದ್ದರಾಮಯ್ಯ ತರಾಟೆ

Last Updated 12 ಸೆಪ್ಟೆಂಬರ್ 2022, 14:45 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಪರಿಹಾರದ ಹಣ ದುರ್ಬಳಕೆ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಕೋವಿಡ್ ಕಾಲದಲ್ಲಿ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡಲು ನಿಗದಿಪಡಿಸಿದ್ದ ₹103.47 ಕೋಟಿ ಹಣದಲ್ಲಿ ₹31.14 ಕೋಟಿಯನ್ನು ಖಾಸಗಿ ಶಾಲೆಗಳ ಆರ್.ಟಿ.ಇ ಶುಲ್ಕ ಮರುಪಾವತಿಗೆ ನೀಡಿದ್ದಿರಲ್ಲಾ? ಇದು ಯಾರ ಮೇಲಿನ ಕಾಳಜಿಯಿಂದ ಬಿ.ಸಿ.ನಾಗೇಶ್‌ ಅವರೇ’ ಎಂದು ಪ್ರಶ್ನಿಸಿದ್ದಾರೆ.

‘ಖಾಸಗಿ ಶಾಲೆಗಳ ಅಕ್ರಮಗಳ ವಿರುದ್ಧ ಸಮರ ಸಾರಿದವರಂತೆ ಹೇಳಿಕೆ ನೀಡುತ್ತಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ, ಕೋವಿಡ್ ಪರಿಹಾರದ ಹಣವನ್ನು ಖಾಸಗಿ ಶಾಲೆಗಳ ಆರ್.ಟಿ.ಇ ಶುಲ್ಕ ಮರುಪಾವತಿಗೆ ದುರ್ಬಳಕೆ ಮಾಡಿರುವುದು ಯಾರ ಮೇಲಿನ ಪ್ರೀತಿಯಿಂದ’ ಎಂದು ಕೇಳಿದ್ದಾರೆ.

ಕೋವಿಡ್ ಪರಿಹಾರಕ್ಕಾಗಿಯೇ ನಿಗದಿಪಡಿಸಿದ್ದ ಹಣವನ್ನು ಪೂರ್ಣವಾಗಿ ಆ ಉದ್ದೇಶಕ್ಕಾಗಿಯೇ ಬಳಸದಿರಲು ಕಾರಣವೇನು? ಆರ್.ಟಿ.ಇ ಮರುಪಾವತಿಗಾಗಿಯೇ 2022-23ನೇ ಸಾಲಿಗೆ ನಿಗದಿಪಡಿಸಿದ್ದ ₹500 ಕೋಟಿ ಹಣವನ್ನು ನಿಮ್ಮ ಇಲಾಖೆ ಪೂರ್ಣವಾಗಿ ಬಳಸಿಕೊಂಡಿದೆಯೇ ಬಿ.ಸಿ.ನಾಗೇಶ್ ಎಂದು ಪ್ರಶ್ನಿಸಿದ್ದಾರೆ.

‘ಶಾಲಾ ಮಕ್ಕಳ ಶೂ ಖರೀದಿಗೆ ಐದು ವರ್ಷಗಳ ಹಿಂದಿನ ದರದಲ್ಲಿ ಹಣ ನೀಡಿ ಶಿಕ್ಷಕರನ್ನು ದಾನಿಗಳ ಮುಂದೆ ಕೈಯೊಡ್ಡುವಂತೆ ಮಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರೇ, ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ತಿಂಗಳಿಗೆ ₹93,000 ನೀಡುತ್ತಿದ್ದೀರಲ್ಲಾ ಇದು ನ್ಯಾಯವೇ’ ಎಂದು ಟ್ವೀಟಿಸಿದ್ದಾರೆ.

‘ಅತಿಥಿ ಉಪನ್ಯಾಸಕರು ಕನಿಷ್ಠ 6000 ರೂಪಾಯಿಯಷ್ಟು ಗೌರವಧನ ಹೆಚ್ಚಿಸಿ ಎಂದು ಕೇಳಿದರೆ ₹3000 ಕೊಟ್ಟು ಬಾಯಿ ಮುಚ್ಚಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರೇ, ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಟೆಂಡರ್ ಕರೆಯದೆ ಮೂರು ತಿಂಗಳಿಗೆ ₹2,83,200 ಖರ್ಚು ಮಾಡುವುದು ಅನ್ಯಾಯ ಅಲ್ಲವೇ’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT