ಬೆಂಗಳೂರು: ‘ಅಲ್ಕೈದಾ’ ಉಗ್ರ ಸಂಘಟನೆ ಸೇರಲು ಮುಂದಾಗಿದ್ದ ಶಂಕಿತ ಉಗ್ರರಾದ ಅಖ್ತರ್ ಹುಸೇನ್ ಲಷ್ಕರ್ ಹಾಗೂ ಅಬ್ದುಲ್ ಅಲೀಂ ಮಂಡಲ್ ಬಂಧನ ಪ್ರಕರಣವನ್ನು ಸಿಸಿಬಿ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಅಧಿಕೃತವಾಗಿ ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಹಾಗೂ ಚೆನ್ನೈನ ಎನ್ಐಎ ಅಧಿಕಾರಿಗಳು ರಾಜಧಾನಿಗೆ ಬಂದು ಮಾಹಿತಿ ಪಡೆದುಕೊಂಡಿದ್ದರು. ಸಿಸಿಬಿ ಪೊಲೀಸರು ಗೃಹ ಇಲಾಖೆಗೆ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಂಕಿತರು ಸಿಸಿಬಿ ಕಸ್ಟಡಿಯಲ್ಲಿದ್ದಾರೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ರಾಜ್ಯದ ಭಟ್ಕಳ ಹಾಗೂ ತುಮಕೂರಿನಲ್ಲೂ ಕಳೆದ ವಾರ ಎನ್ಐಎ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ಶೋಧ ನಡೆಸಿದ್ದರು. ಹೀಗಾಗಿ, ಈ ಪ್ರಕರಣವನ್ನೂ ಎನ್ಐಎಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.