ಕಲಬುರ್ಗಿ: ಬಂಜಾರ ಸಮುದಾಯದ ಧರ್ಮ ಗುರು,ಮಹಾರಾಷ್ಟ್ರದ ಪೌರಾಘಡದಲ್ಲಿರುವಪೌರಾದೇವಿ ಪೀಠದ ಪೀಠಾಧಿಪತಿ ರಾಮರಾವ್ ಮಹಾರಾಜ (90) ಶುಕ್ರವಾರ ರಾತ್ರಿ ನಿಧನರಾದರು.
ಕರ್ನಾಟಕವೂ ಸೇರಿದಂತೆ ದೇಶದ ಲ್ಲಿರುವ ಬಂಜಾರ ಸಮುದಾಯದ ಧರ್ಮಗುರುಗಳಲ್ಲಿ ಅವರು ಪ್ರಮುಖರಾಗಿದ್ದರು. 1948ರಲ್ಲಿ ಪರಶುರಾಮ ಮಹಾರಾಜರು ನಿಧನರಾದ ನಂತರ ರಾಮರಾವ್ ಮಹಾರಾಜರು ಪೀಠ ಅಲಂಕರಿಸಿದ್ದರು. ಆರಂಭದಲ್ಲಿ 12 ವರ್ಷ ಅಗ್ನಿ ಅನುಷ್ಠಾನ, ಬಳಿಕ 12 ವರ್ಷ ಮೌನಾನುಷ್ಠಾನ ಕೈಗೊಂಡಿದ್ದರು.
ಪೌರಾದೇವಿಯಲ್ಲಿ ಪಂಢರಪುರ ದೇವಸ್ಥಾನದ ಮಾದರಿಯಲ್ಲಿ ಹೊಸ ಜೋಡಿ ಮಂದಿರ ನಿರ್ಮಿಸಿದ್ದರು. ದೇಶದ ಉದ್ದಗಲಕ್ಕೂ ಸಂಚರಿಸಿ ದುಶ್ಚಟ ಮತ್ತು ಮೌಢ್ಯಾಚರಣೆ ವಿರುದ್ಧ ಸಮುದಾಯದಲ್ಲಿ ಅರಿವು ಮೂಡಿಸಿದ್ದರು. ಅವರ ಧರ್ಮ ಕಾರ್ಯ ಹಾಗೂ ಸಮಾಜ ಸೇವೆ ಪರಿಗಣಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.
ಅಂತ್ಯಸಂಸ್ಕಾರ: ‘ಭಾನುವಾರ (ನ. 1) ಮಧ್ಯಾಹ್ನ 12.30ಕ್ಕೆಪೌರಾಘಡದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಅಂತಿಮ ದರ್ಶನ ಮತ್ತು ಅಂತ್ಯಸಂಸ್ಕಾರದ ಕ್ರಿಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ ಮಾಡಲಾಗುವುದು. ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಭಕ್ತರುಬರಬಾರದು ಎಂದು ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿದೆ’ ಎಂದು ಕಲಬುರ್ಗಿ ಸಂಸದ ಡಾ. ಉಮೇಶ ಜಾಧವ ಅವರು ತಿಳಿಸಿದ್ದಾರೆ.