ಬೆಂಗಳೂರು: ‘ಅಪ್ಪಟ ಸಮಾಜವಾದಿ ಆಗಿದ್ದ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ‘ರೂಲ್ ಆಫ್ ಲಾ’ ಬಾರು ಕೋಲು ಆಗಿತ್ತು. ಅವರ ವಿಚಾರಧಾರೆ ಹಾಗೂ ಚಿಂತನೆಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಅವರ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಚಿಂತನೆಯ ‘ಬಾರುಕೋಲು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
'ಪ್ರಜಾಪ್ರಭುತ್ವ, ಕೃಷಿ, ಭ್ರಷ್ಟಾ ಚಾರ, ಅಧಿಕಾರಿಗಳ ನಡೆ ಬಗ್ಗೆ ನಂಜುಂಡಸ್ವಾಮಿ ಅವರು ತಮ್ಮದೇ ಆದ ವಿಚಾರಧಾರೆಗಳನ್ನು ಹೊಂದಿದ್ದರು. ಅನ್ಯಾಯಕ್ಕೆ ಒಳಗಾದವರ ಪರ ನಿಂತು ಸರ್ಕಾರ ಹಾಗೂ ಅಧಿಕಾರಿಗಳಿಗೆ ಬಾರುಕೋಲು ಬೀಸುತ್ತಿದ್ದರು’ ಎಂದು ನಂಜುಂಡಸ್ವಾಮಿ ಜೊತೆಗಿನ ದಿನಗಳನ್ನು ಮೆಲುಕು ಹಾಕಿದರು.
ವಕೀಲ ರವಿವರ್ಮಕುಮಾರ್, ‘ಪ್ರೊ. ನಂಜುಂಡಸ್ವಾಮಿ ಅವರು ಜ್ವಲಂತ ಸಮಸ್ಯೆಗಳಿಗೆ ಉತ್ತರ ಹುಡು ಕಲು ಹೋರಾಟ ನಡೆಸಿದವರು ಎಂದು ಅಭಿಪ್ರಾಯಪಟ್ಟರು.
ನಂಜುಂಡಸ್ವಾಮಿಯವರ ಪುತ್ರಿ ಚುಕ್ಕಿ, ತಾವು ಸಂಗ್ರಹಿಸಿಟ್ಟಿದ್ದ ತಂದೆಯ ಬಾರುಕೋಲನ್ನು ಸಿದ್ದರಾಮಯ್ಯ ಅವರಿಗೆ ನೀಡಿದರು. ಅದನ್ನು ಹೆಗಲ ಮೇಲೆ ಹಾಕಿಕೊಂಡ ಸಿದ್ದರಾಮಯ್ಯ, ‘ಇದರಿಂದ ಸರ್ಕಾರಕ್ಕೆ ಹೊಡೆಯಬೇಕಾ?’ ಎಂದರು.
‘ಚಾರ್ಮಿನಾರ್ ಸಿಗರೇಟ್, ಅರ್ಧ ಗಂಟೆಗೊಂದು ಟೀ’
‘ನಂಜುಂಡಸ್ವಾಮಿ ಅವರು ನನ್ನನ್ನು ಸೇರಿ ಹಲವು ಸ್ನೇಹಿತರನ್ನು ನ್ಯಾಯಾಲಯ ಆವರಣದಲ್ಲಿದ್ದ ಹೋಟೆಲ್ಗೆ ಕರೆದೊಯ್ಯುತ್ತಿದ್ದರು. ನಾವೂ ತರಗತಿಗೆ ಚಕ್ಕರ್ ಹಾಕಿ ಅವರ ಜತೆ ಹೋಗುತ್ತಿದ್ದೆವು. ತಾವು ಸೇದುತ್ತಿದ್ದ ಚಾರ್ಮಿನಾರ್ ಸಿಗರೇಟ್ ನಮಗೂ ಕೊಡುತ್ತಿದ್ದರು. ಅದರ ಜೊತೆಯಲ್ಲೇ ಅರ್ಧ ಗಂಟೆಗೊಮ್ಮೆ ಟೀ ಕುಡಿಸುತ್ತಿದ್ದರು. ರಾಜಕೀಯ ಹಾಗೂ ಸಮಾಜದ ಎಲ್ಲ ಜ್ವಲಂತ ಸಮಸ್ಯೆಗಳ ಬಗ್ಗೆ ನಮಗೆ ತಿಳಿಸುತ್ತಿದ್ದರು. ಅವರ ಮಾತಿನಿಂದಲೇ ನನಗೆ ರಾಜಕೀಯದ ಬಗ್ಗೆ ಒಲವು ಮೂಡಿತು’ ಎಂದು ಸಿದ್ದರಾಮಯ್ಯ ಹೇಳಿದರು.