ಬೆಂಗಳೂರು: ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ (ಬೆಂಗಳೂರು ಟೆಕ್ ಸಮಿಟ್) ನವೆಂಬರ್ 19 ರಿಂದ 21ರ ವರೆಗೆ ನಡೆಯಲಿದೆ ಎಂದುಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಇದಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರತಿನಿಧಿಗಳ ಜತೆ ವರ್ಚುವಲ್ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೃಂಗಸಭೆಯ ರೂಪುರೇಷೆಗಳನ್ನು ಶೀಘ್ರವೇ ಸಿದ್ಧಪಡಿಸಲಾಗುವುದು ಎಂದರು.
ರಾಜ್ಯದ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ನಿರ್ಣಾಯಕ ಪಾತ್ರವಹಿಸಿದೆ. ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದು ಮತ್ತಷ್ಟು ಗಟ್ಟಿಯಾಗಬೇಕಿದೆ. ಇದಕ್ಕೆ ‘ಬೆಂಗಳೂರು ಟೆಕ್ ಸಮಿಟ್’ ದೊಡ್ಡ ಮಟ್ಟದ ಕೊಡುಗೆ ನೀಡಬೇಕು ಎಂದ ಅಶ್ವತ್ಥನಾರಾಯಣ ಹೇಳಿದರು.
ಕೋವಿಡ್–19 ಸಂಕಷ್ಟ ಕಾಲದಲ್ಲಿ ದೇಶದಲ್ಲಿ 130 ಕೋಟಿ ಜನರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವೇ ಸೆಕೆಂಡ್ಗಳಲ್ಲಿ ತಲುಪಲು ಸಾಧ್ಯವಾಯಿತು. ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆ ಆಯಿತು. ಎಲ್ಲವೂ ವೇಗವಾಗಿ ಮತ್ತು ಪಾರದರ್ಶಕವಾಗಿ ನಡೆಯಿತು ಎಂದು ಅವರು ತಿಳಿಸಿದರು.
ತಂತ್ರಜ್ಞಾನ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಹಳ್ಳಿಯ ಮೂಲೆ– ಮೂಲೆಗೂ ಅದು ತಲುಪಬೇಕಾಗಿದೆ ಎಂದು ಹೇಳಿದರು.