ಬೆಂಗಳೂರು: ‘ಆರ್ಥಿಕ ಹಿಂಜರಿತ ಇದ್ದರೂ ಭಾವನಾತ್ಮಕ ವಿಷಯಗಳಿಂದ ಮರೆಮಾಚುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ’ ಎಂದು ವಿಧಾನ ಪರಿಷತ್ನಲ್ಲಿ ಗುರುವಾರ ಕಾಂಗ್ರೆಸ್ನ ಪಿ.ಆರ್. ರಮೇಶ್ ಟೀಕಿಸಿದರು.
ಬಜೆಟ್ ಕುರಿತ ಚರ್ಚೆಯಲ್ಲಿ ಅವರು, ‘ಬಿಜೆಟ್ ಸಂಪೂರ್ಣವಾಗಿ ಅಶಿಸ್ತಿನಿಂದ ಕೂಡಿದೆ. ಹಣಕಾಸಿನ ವ್ಯವಸ್ಥೆ ನಿರ್ವಹಿಸಲಾಗದ ಪರಿಸ್ಥಿತಿಯಿದೆ. ಕೇಂದ್ರದಿಂದಲೂ ರಾಜ್ಯಕ್ಕೆ ದೊರೆಯಬೇಕಾದ ಪಾಲು ದೊರೆಯುತ್ತಿಲ್ಲ’ ಎಂದು ದೂರಿದರು.
‘ಗೋವುಗಳ ರಕ್ಷಣೆ ಹೆಸರಿನಲ್ಲಿ ಮತ ಪಡೆಯುತ್ತೀರಿ. ಆದರೆ, ಬೆಂಗಳೂರಿನಲ್ಲೇ ಉತ್ತಮ ಗುಣಮಟ್ಟದ ಗೋಮಾಂಸ ಎಲ್ಲೆಡೆ ಸಿಗುತ್ತಿದೆ. ಹಾಗಾದರೆ, ಸರ್ಕಾರ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.
‘ಅಧಿಕಾರಿಗಳ ಮನೆಯ ಪೈಪ್, ತೊಟ್ಟಿಗಳಲ್ಲಿ ದುಡ್ಡು ಬರುತ್ತಿದೆ. ಇಂತಹ ಭ್ರಷ್ಟ ವ್ಯವಸ್ಥೆಗೆ ಯಾರು ಕಾರಣ? ನಿರುದ್ಯೋಗವೂ ಹೆಚ್ಚಾಗಿದೆ. ಯುವಕರಿಗೆ ಉದ್ಯೋಗಾವಕಾಶ ಇಲ್ಲದಂತಾಗಿದೆ. ಇಡೀ ಬಜೆಟ್ ಕನ್ನಡಿಯಲ್ಲಿರುವ ಗಂಟು’ ಎಂದು ಟೀಕಿಸಿದರು.
‘ಒಬಿಸಿಗೆ ಮೀಸಲಾತಿ ಬಳಿಕವೇ ಚುನಾವಣೆ’ ‘ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿದ ಬಳಿಕವೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು’ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
‘ಸರ್ಕಾರ ಹಿಂದುಳಿದ ವರ್ಗಗಳ ಪರವಾಗಿಯೇ ಇದೆ. ಮೀಸಲಾತಿ ಕಲ್ಪಿಸುವ ಬಗ್ಗೆ ಈಗಾಗಲೇ ಎರಡು–ಮೂರು ಬಾರಿ ಸಭೆಗಳನ್ನು ಮಾಡಲಾಗಿದೆ’ ಎಂದು ವಿಧಾನಪರಿಷತ್ನಲ್ಲಿ ತಿಳಿಸಿದರು.
ಸದನದಲ್ಲಿ ಕೇಳಿದ್ದು... ಜಿಎಸ್ಟಿ ನಮ್ಮ ಕೂಸು. ಈ ಬಗ್ಗೆ ಹೆಮ್ಮೆ ಇದೆ. ಆದರೆ, ಇದನ್ನು ಜಾರಿಗೊಳಿಸಿದ ರೀತಿ ವಿನಾಶಕಾರಿಯಾಗಿದೆ. -ಬಿ.ಕೆ. ಹರಿಪ್ರಸಾದ್,ವಿಧಾನಪರಿಷತ್ ವಿರೋಧ ಪಕ್ಷದ ನಾಯಕ
*
ಕಲ್ಯಾಣ ಕರ್ನಾಟಕದಲ್ಲಿ 34 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು. -ಅರವಿಂದ ಕುಮಾರ ಅರಳಿ,ಕಾಂಗ್ರೆಸ್ ಸದಸ್ಯ
*
ಸ್ತ್ರೀಶಕ್ತಿ ಸಂಘಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಈ ಸಂಘಗಳು ತಯಾರಿಸಿದ ವಸ್ತುಗಳನ್ನೇ ಸರ್ಕಾರ ಖರೀದಿಸಬೇಕು. -ಭಾರತಿ ಶೆಟ್ಟಿ,ಬಿಜೆಪಿ ಸದಸ್ಯೆ