ಮೈಸೂರು: ‘ಮೊಟ್ಟೆ ಎಸೆತವನ್ನು ನೆಪವಾಗಿಸಿಕೊಂಡು ಕೊಡಗಿಗೆ ಲಕ್ಷಾಂತರ ಜನರೊಂದಿಗೆ ಪಾದಯಾತ್ರೆ ಮಾಡಲು ಮುಂದಾಗಿರುವುದು ತಪ್ಪು. ವಿರೋಧ ಪಕ್ಷದ ನಾಯಕರಾಗಿ ಗೌರವಯುತವಾಗಿ ನಡೆದುಕೊಳ್ಳಲಿ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
‘ಮೊಟ್ಟೆ ಎಸೆದವ ಕಾಂಗ್ರೆಸ್ಸಿನವ ಎಂದು ಹೇಳಿಕೊಂಡಿದ್ದಾನೆ. ಕೃತ್ಯ ಯಾರೇ ಎಸಗಿದ್ದರೂ ತಪ್ಪೇ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ ಮೇಲೂ ಪಾದಯಾತ್ರೆ ಮಾಡುವ ಹಠಕ್ಕೆ ಬಿದ್ದಿರುವುದು ಸರಿಯಲ್ಲ’ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಇನ್ನು ಮುಂದಾದರೂ ಸಿದ್ದರಾಮಯ್ಯ ಶಾಂತ ರೀತಿಯಿಂದ ವರ್ತಿಸಲಿ. ಇದನ್ನು ಮೀರಿಯೂ ಕೊಡಗಿನಲ್ಲಿ ಲಕ್ಷಾಂತರ ಮಂದಿ ಸೇರಿಸಿ, ಗೊಂದಲದ ವಾತಾವರಣ ನಿರ್ಮಿಸುತ್ತಿದ್ದಾರೆ. ಅನಾಹುತವಾದರೆ ಅದಕ್ಕೆ ಸಿದ್ದರಾಮಯ್ಯ ಅವರೇ ಜವಾಬ್ದಾರರಾಗುತ್ತಾರೆ’ ಎಂದರು.
‘ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಸಿದ್ದರಾಮಯ್ಯ ಟೀಕಿಸುತ್ತಿದ್ದಾರೆ. ಧರ್ಮ– ದೇಶದ ಪರಿಕಲ್ಪನೆ ಇಲ್ಲದವರು ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಇದೇ ರೀತಿ ಮುಂದುವರಿದರೆ ಜನರು ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ’ ಎಂದು ಗುಡುಗಿದರು.