ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಕೆ.ರಘುನಾಥ್ ನಿಗೂಢ ಸಾವಿನ ಪ್ರಕರಣ ಕುರಿತಂತೆ ಖ್ಯಾತ ಉದ್ಯಮಿ, ಮಾಜಿ ಸಂಸದ, ಟಿಟಿಡಿ ಅಧ್ಯಕ್ಷರೂ ಆಗಿದ್ದ ದಿ. ಡಿ.ಕೆ.ಆದಿಕೇವಶವುಲು ಅವರ ಪುತ್ರ ಡಿ.ಎ.ಶ್ರೀನಿವಾಸ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಕೆ.ರಘುನಾಥ್ ಅವರ ಪತ್ನಿ ಎಂ.ಮಂಜುಳಾ, ಪುತ್ರ ರೋಹಿತ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಭಾಗಶಃ ಪುರಸ್ಕರಿಸಿದ್ದು, ಸಿಬಿಐ ತನಿಖೆಗೆ ಆದೇಶಿಸಿದೆ.
‘ಪೊಲೀಸ್, ಎಸ್ಐಟಿ ತನಿಖೆಯಲ್ಲಿ ಲೋಪಗಳಿವೆ’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ‘ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವ ಅಗತ್ಯವಿದೆ. ಹಾಗಾಗಿ, ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡಬೇಕು’ ಎಂದು ಸಿಬಿಐಗೆ ಆದೇಶಿಸಿದೆ.
ಪ್ರಕರಣವೇನು?: ಕೆ.ರಘುನಾಥ್2019ರ ಮೇನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ‘ಇದು ಆತ್ಮಹತ್ಯೆಯಲ್ಲ, ಕೊಲೆ’ ಎಂಬ ಆರೋಪದಡಿ ಶ್ರೀನಿವಾಸ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
‘ಆಸ್ತಿ ವಿಚಾರ ಮಾತನಾಡಲು ನನ್ನ ಪತಿ ರಘುನಾಥ್ ಅವರನ್ನು ಕರೆಸಿ ಕೊಂಡಿದ್ದ ಆರೋಪಿಗಳು ಕೊಲೆ ಮಾಡಿದ್ದಾರೆ’ ಎಂದು ಪತ್ನಿ ಮಂಜುಳಾ ದೂರು ನೀಡಿದ್ದರು. ‘ರಘುನಾಥ್ ತೀರಿ ಕೊಂಡ 7 ತಿಂಗಳ ನಂತರ ಆರೋಪಿ ಗಳೇ ಫೋರ್ಜರಿ ವಿಲ್ ಮಾಡಿಸಿ ಬಹುಕೋಟಿ ಮೌಲ್ಯದ ಸ್ಥಿರಾಸ್ತಿ ಕಬಳಿ ಸಲು ಮುಂದಾಗಿದ್ದಾರೆ’ ಎಂದು ವಿವರಿಸಿ ದ್ದರು. ದೂರಿನನ್ವಯ ಪೊಲೀಸ್, ಎಸ್ಐಟಿ ತನಿಖೆ ನಡೆಸಲಾಗಿತ್ತು.
ತನಿಖೆಯನ್ನು ಪೂರ್ಣಗೊಳಿಸಿದ್ದ ಎಸ್ಐಟಿ, ‘ಆರೋಪದಲ್ಲಿ ಹುರುಳಿಲ್ಲ, ಪ್ರಕರಣ ಮುಕ್ತಾಯಗೊಳಿಸಬಹುದು’ ಎಂದು ನ್ಯಾಯಾಲಯಕ್ಕೆ ಅಂತಿಮ ‘ಬಿ’ ವರದಿ ಸಲ್ಲಿಸಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.