ಬೆಂಗಳೂರು: ‘ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು, ಹೀಗಾಗಿ ಮಸ್ಕಿಯಲ್ಲಿ ಅವರಿಗೆ ಅಭ್ಯರ್ಥಿ ಸಿಕ್ಕಿಲ್ಲ. ನಿಜಕ್ಕೂ ಇದು ನಾಚಿಕೆಗೇಡಿನ ವಿಚಾರ’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸೋಮವಾರ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಯಾರನ್ನೇ ಕಣಕ್ಕೆ ಇಳಿಸಿದರೂ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ತಂತ್ರವನ್ನು ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯವರು ಮಾಡುತ್ತಾರೆ‘ ಎಂದು ತಿಳಿಸಿದರು.
ತಮ್ಮ ಪಕ್ಷದಲ್ಲಿ ಅಭ್ಯರ್ಥಿ ಇಲ್ಲದೇ ಹತಾಶ ಸ್ಥಿತಿಯಿಂದ ಕಾಂಗ್ರೆಸ್ ಪಕ್ಷವು ಬಿಜೆಪಿಯಿಂದ ವ್ಯಕ್ತಿಗಳನ್ನು ಸೆಳೆಯುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.
‘ರಾಜ್ಯದಲ್ಲಿ ಶತಶತಮಾನಗಳಿಂದ ನೆಲೆಸಿರುವ ಮರಾಠಾ ಸಮುದಾಯದ ಅಭಿವೃದ್ಧಿಗಾಗಿ ಅಭಿವೃದ್ಧಿ ನಿಗಮ ಮಾಡಲಾಗಿದೆ. ಇದನ್ನು ಭಾಷೆಗೆ ಸಂಬಂಧ ಕಲ್ಪಿಸಿ ವಿರೋಧ ಮಾಡುವುದು ತಪ್ಪು. ಮರಾಠರೂ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಕನ್ನಡಿಗರೇ ಆಗಿದ್ದಾರೆ. ಇಂತಹ ವಿಚಾರದಲ್ಲಿ ವಿವಾದ ಎಬ್ಬಿಸುವುದು ಸರಿಯಲ್ಲ’ ಎಂದು ವಿಜಯೇಂದ್ರ ಹೇಳಿದರು.
‘ಶನಿವಾರ ದೆಹಲಿಗೆ ಹೋಗಿದ್ದು ಖಾಸಗಿ ಕಾರಣಕ್ಕೆ. ಅದಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ. ಪಕ್ಷದ ವರಿಷ್ಠನ್ನೂ ಭೇಟಿ ಮಾಡಿರಲಿಲ್ಲ’ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ವರಿಷ್ಠರು ಯಾವಾಗ ನಿರ್ಧಾರ ಮಾಡುತ್ತಾರೋ ನೋಡಬೇಕು. ವರಿಷ್ಠರ ನಿರ್ಧಾರ ಹೊರಬಿದ್ದಾಗ ಮುಖ್ಯಮಂತ್ರಿಯವರು ವಿಸ್ತರಣೆ ಮಾಡುತ್ತಾರೆ‘ ಎಂದರು.