ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ತೊಡಕು ನಿವಾರಿಸಿ ಜಾತಿ ಗಣತಿ ವರದಿ ಸಲ್ಲಿಕೆ: ಜಯಪ್ರಕಾಶ್ ಹೆಗ್ಡೆ

Last Updated 28 ಸೆಪ್ಟೆಂಬರ್ 2021, 16:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಗೆ (ಜಾತಿವಾರು ಜನಗಣತಿ) ಸಂಬಂಧಿಸಿದಂತೆ ಎದುರಾಗಿರುವ ಕಾನೂನು ತೊಡಕು ನಿವಾರಿಸಿದ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯನ್ನು ಸುಮ್ಮನೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ವರದಿ ವ್ಯರ್ಥವೂ ಆಗಬಾರದು. ಕಾನೂನಿನ ತೊಡಕು ಏನಿದೆಯೊ ಅದನ್ನು ಪರಿಹರಿಸಿಕೊಳ್ಳುತ್ತೇವೆ ಎಂದರು.

ಯಾವುದೇ ವರದಿ ಸಿದ್ಧಪಡಿಸಿದರೂ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿ ಸಹಿ ಹಾಕಬೇಕು. ಜಾತಿವಾರು ಜನಗಣತಿ ಕೊನೆಯ ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ. ಅಂದಿನ ವರದಿಗೆ ಇಂದಿನ ಸದಸ್ಯ ಕಾರ್ಯದರ್ಶಿ ಹೇಗೆ ಸಹಿ ಹಾಕಲು ಸಾಧ್ಯ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದನ್ನು ಕಾನೂನಿನಲ್ಲಿ ಅಧಿಕೃತಗೊಳಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಬರುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ಆಗುತ್ತಿದೆ ಎಂದು ಹೇಳಿದರು.

’2ಎ‘ಗೆ ಪಂಚಮಸಾಲಿ– ಸಾರ್ವಜನಿಕ ವಿಚಾರಣೆ: ಲಿಂಗಾಯತ ಪಂಚಮಸಾಲಿ ಸಮಾಜವನ್ನು ‘2ಎ’ಗೆ ಸೇರಿಸುವ ಬಗ್ಗೆ ಪರ ಮತ್ತು ವಿರುದ್ಧವಾದ ಅರ್ಜಿಗಳು ಆಯೋಗಕ್ಕೆ ಸಲ್ಲಿಕೆ ಆಗಿವೆ. ಅ.11 ಮತ್ತು 12ಕ್ಕೆ ಸಾರ್ವಜನಿಕ ವಿಚಾರಣೆ ಇದೆ. ಯಾವ ಜಾತಿಯವರು ಎಷ್ಟು ಮಂದಿ ಉದ್ಯೋಗದಲ್ಲಿ ಇದ್ದಾರೆ ಎಂಬ ಮಾಹಿತಿ ನೀಡುವಂತೆ ವಿಶ್ವವಿದ್ಯಾಲಯ, ಸರ್ಕಾರಿ ಇಲಾಖೆ ಮತ್ತು ಸರ್ಕಾರಿ ಒಡೆತನದ ಸಂಸ್ಥೆಗಳಿಗೆ ತಿಳಿಸಿದ್ದೇವೆ. ಆ ಮಾಹಿತಿ ಬರುತ್ತಿದೆ ಎಂದರು.

ಕೋವಿಡ್ ಕಾರಣದಿಂದ ಕ್ಷೇತ್ರ ಅಧ್ಯಯನ ಸಾಧ್ಯವಾಗಿಲ್ಲ. ಇನ್ನು ಮುಂದೆ ಪಂಚಮಸಾಲಿ ಸಮುದಾಯದ ಸಾಮಾಜಿಕ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿಯಲು ಅವರು ವಾಸಿಸುವ ಸ್ಥಳಗಳಿಗೆ ಭೇಟಿ ನೀಡುತ್ತೇವೆ. ಅಧ್ಯಯನದ ನಂತರ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿಕೊಡಲಾಗುವುದು ಎಂದು ಹೇಳಿದರು.

ವರದಿ ಕೊಡದೆ ಸರ್ಕಾರ ಏನನ್ನೂ ಮಾಡಲು ಸಾಧ್ಯವಿಲ್ಲ. ಕೊಟ್ಟ ವರದಿ ಪರಿಗಣಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದರು.

ಜಾತಿಪಟ್ಟಿಗೆ ಸೇರ್ಪಡೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ 10 ವರದಿಗಳನ್ನು ಆಯೋಗ ಸಿದ್ಧಪಡಿಸಿದೆ. ಆಯೋಗದ ಸಭೆಯಲ್ಲಿ ಚರ್ಚಿಸಿ ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕೆಲವರು ಜಾತಿಪಟ್ಟಿಗೆ ಸೇರಬೇಕಾಗಿದೆ. ಅಂತಹವರ ಪಟ್ಟಿ ಕಳುಹಿಸಿ ಎಂದು ಪಿಡಿಒ, ತಹಶೀಲ್ದಾರರಿಗೆ ಸೂಚಿಸಿದ್ದೇವೆ ಎಂದರು.

‘2ಎ’ ಗೆ ಪಂಚಮಸಾಲಿ– ಸಾರ್ವಜನಿಕ ವಿಚಾರಣೆ

ಲಿಂಗಾಯತ ಪಂಚಮಸಾಲಿ ಸಮಾಜವನ್ನು ‘2ಎ’ಗೆ ಸೇರಿಸುವ ಬಗ್ಗೆ ಪರ ಮತ್ತು ವಿರುದ್ಧವಾದ ಅರ್ಜಿಗಳು ಆಯೋಗಕ್ಕೆ ಸಲ್ಲಿಕೆ ಆಗಿವೆ.
ಅ.11 ಮತ್ತು 12ಕ್ಕೆ ಸಾರ್ವಜನಿಕ ವಿಚಾರಣೆ ಇದೆ. ಯಾವ ಜಾತಿಯವರು ಎಷ್ಟು ಮಂದಿ ಉದ್ಯೋಗದಲ್ಲಿ ಇದ್ದಾರೆ ಎಂಬ ಮಾಹಿತಿ ನೀಡುವಂತೆ ವಿಶ್ವವಿದ್ಯಾಲಯ, ಸರ್ಕಾರಿ ಇಲಾಖೆ ಮತ್ತು ಸರ್ಕಾರಿ ಒಡೆತನದ ಸಂಸ್ಥೆಗಳಿಗೆ ತಿಳಿಸಿದ್ದೇವೆ. ಆ ಮಾಹಿತಿ ಬರುತ್ತಿದೆ ಎಂದು ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಅಕ್ಟೋಬರ್‌ 1ಕ್ಕೆ ಗಡುವು

ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ತಳೆಯುವ ನಿಲುವನ್ನು ಅ. 1ರೊಳಗೆ ಸ್ಪಷ್ಟಪಡಿಸಬೇಕು. ಇಲ್ಲವಾದರೆ ಮತ್ತೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಇಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಮಂಗಳವಾರ ಏರ್ಪಡಿಸಿದ್ದ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌’ನಲ್ಲಿ ಸ್ವಾಮೀಜಿ ಮಾತನಾಡಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ. ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಒಳಪಂಗಡ ಶೇ 50ರಷ್ಟು ಜನಸಂಖ್ಯೆ ಹೊಂದಿದೆ. ಸರ್ಕಾರ ನೀಡಿದ್ದ ಗಡುವು ಸೆ. 15ಕ್ಕೆ ಮುಕ್ತಾಯವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸರ್ಕಾರ ತರಿಸಿಕೊಂಡು ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು. ಇಲ್ಲವಾದರೆ, ಮಾರ್ಚ್‌ 15ರಂದು ಸ್ಥಗಿತಗೊಂಡ ಹೋರಾಟವನ್ನು ಮತ್ತೆ ಕೈಗೆತ್ತಿಕೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT