ಬೆಂಗಳೂರು: ನ್ಯಾಯಾಧೀಶರ ಮುಂದೆ ತಮ್ಮ ಮಗಳು ನೀಡಿರುವ ಹೇಳಿಕೆ ರದ್ದುಪಡಿಸುವಂತೆ ಕೋರಿ ಶಾಸಕ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದ ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
‘2021ರ ಮಾರ್ಚ್ 30ರಂದು ನ್ಯಾಯಾಧೀಶರ ಮುಂದೆ ಮಗಳು (ಸಂತ್ರಸ್ತೆ) ಹೇಳಿಕೆ ದಾಖಲಿಸುವಾಗ ಕಾಂಗ್ರೆಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಕೀಲ ಸೂರ್ಯಮುಕುಂದರಾಜ್ ಹಾಜರಿದ್ದರು. ಇದು ಸಿಆರ್ಪಿಸಿ 164 ಸೆಕ್ಷನ್ಗೆ ವಿರುದ್ಧ. ಹೀಗಾಗಿ, ಹೇಳಿಕೆ ರದ್ದುಪಡಿಸಬೇಕು’ ಎಂದು ಕೋರಿದ್ದರು.
‘ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಯಾರೂ ಬಲವಂತ ಮಾಡಿಲ್ಲ ಎಂದು ಸಂತ್ರಸ್ತೆ ಈಗಾಗಲೇ ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆ ಪೋಷಕರಿಂದ ದೂರ ಇದ್ದಾರೆ ಎಂದು ಎಸ್ಐಟಿ ವಕೀಲರು ತಿಳಿಸಿದ್ದಾರೆ. ಹೀಗಾಗಿ, ಸಂತ್ರಸ್ತೆಯ ಹೇಳಿಕೆ ಪ್ರಶ್ನಿಸುವ ಹಕ್ಕು ಅವರ ತಂದೆಗೆ ಇಲ್ಲ’ ಎಂದು ಪ್ರಾಸಿಕ್ಯೂಷನ್ ವಿವರಿಸಿತು.