ಬೆಂಗಳೂರು: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಮಾತನಾಡಿರುವ ರಮೇಶ್ ಜಾರಕಿಹೊಳಿ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಎನ್ಎಸ್ಯುಐ ರಾಷ್ಟ್ರೀಯ ಸಂಚಾಲಕ ಫಹಾದ್ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಕಬ್ಬನ್ಪಾರ್ಕ್ ಪೊಲೀಸರಿಗೆ ಲಿಖಿತ ದೂರು ನೀಡಿರುವ ಫಹಾದ್, ಹೈಕೋರ್ಟ್ ವಕೀಲರ ಮೂಲಕ ಮಾನನಷ್ಟ ಮೊಕದ್ದಮೆ ಹಾಕಲು ತಯಾರಿ ನಡೆಸಿಕೊಂಡಿರುವುದಾಗಿಯೂ ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ್ ವಿರುದ್ಧ ಅವಾಚ್ಯ ಶಬ್ಧದಿಂದ ಮಾತನಾಡಿರುವ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ಮಾತಿನಿಂದ ಇಡೀ ರಾಜ್ಯ ನಗೆಪಾಟಲಿಗೀಡಾಗಿದೆ. ಒಂದು ವೇಳೆ ಅವರು ಡಿಕೆಶಿ ಬಳಿ ಕ್ಷಮೆ ಕೇಳಲಿಲ್ಲವೆಂದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದಾಗಿಎಚ್ಚರಿಕೆ ನೀಡಿದ್ದಾರೆ.
ಇದು ಕೇವಲ ಠಾಣೆಯಲ್ಲಿ ದೂರು ದಾಖಲಿಸುವ ವಿಚಾರವಲ್ಲ. ತುಂಬಾ ಗಂಭೀರತೆ ಪಡೆದುಕೊಳ್ಳುತ್ತಿರುವ ವಿಚಾರ. ಹೀಗಾಗಿ ಪೊಲೀಸರು ಕ್ರಮ ಜರುಗಿಸಬೇಕು. ಕೋರ್ಟ್ನಲ್ಲೂ ನಾವು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.