ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಾದ್ಯಂತ ರೈತರು ರಸ್ತೆ ತಡೆಯುವ ಮೂಲಕ ಚಕ್ಕಾ ಜಾಮ್ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಜಯಪುರದ ಸಿಂದಗಿ ಬೈಪಾಸ್ ಬಳಿ ಹುಬ್ಬಳ್ಳಿ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ, ಪ್ರಾಂತ ರೈತ ಸಂಘಟನೆ, ಹಸಿರು ಸೇನೆ, ಎಐಡಿಎಸ್ ಒ, ಸಿಐಟಿಯು, ಎಐಕೆಕೆಎಂಎಸ್, ಎಐಯುಟಿಯುಸಿ, ಅಖಿಲ ಭಾರತ ಕಿಶಾನ್ ಸಭಾ ಮತ್ತಿತರ ಸಂಘಟನೆಗಳು ಹೆದ್ದಾರಿ ತಡೆಯಲ್ಲಿ ಭಾಗವಹಿಸಿವೆ.
ಜೈಜವಾನ್, ಜೈಕಿಸಾನ್ ಘೋಷಣೆಗಳು ಮೊಳಗುತ್ತಿವೆ. ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿಗೇಟ್ ಬಳಿ ರೈತ ಸಂಘದ ಮುಖಂಡರು ಪ್ರತಿಭಟಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರನ್ನು ಬಂಧಿಸಿದರು.
ತುಮಕೂರಿನಲ್ಲಿ ಬಂಧನದ ವೇಳೆ ಪೊಲೀಸರು ಮತ್ತು ರೈತರ ಚಕಮಕಿ#ChakkaJam pic.twitter.com/8bQbzaP6gf
— ಪ್ರಜಾವಾಣಿ | Prajavani (@prajavani) February 6, 2021
ಚಿಕ್ಕಮಗಳೂರಿನಲ್ಲಿ ರೈತಸಂಘ- ಹಸಿರು ಸೇನೆ, ಕಿಸಾನ್ ಮೋರ್ಚಾ ಘಟಕ, ಬಿಎಸ್ಪಿ ಜಿಲ್ಲಾ ಘಟಕದವರು ನಗರದ ಹೊರವಲಯದ ಹಿರೇಮಗಳೂರು ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಾಮನಗರದ ಎಪಿಎಂಸಿ ವೃತ್ತದಲ್ಲಿ ರೈತ ಸಂಘಟನೆಗಳು ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿದವು. ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಇದನ್ನೂ ಓದಿ.. ದೇಶದಾದ್ಯಂತ ಚಕ್ಕಾ ಜಾಮ್ Live updates
ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿ ಟೋಲ್ ಬಳಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ನಿಚ್ಚಣಕಿ ರೈತರು ರಸ್ತಾರೋಕೋ ನಡೆಸಿದ್ದಾರೆ. ಕಿತ್ತೂರು, ತಡಕೋಡ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಪ್ರಯಾಣಿಕರು ಮತ್ತು ರೈತ ಸಂಘಟನೆ ಕಾರ್ಯಕರ್ತರ ಮಧ್ಯ ಮಾತಿನ ಚಕಮಕಿ ನಡೆದಿದ್ದು, ನಮ್ಮ ಮೇಲೆ ವಾಹನ ಚಲಿಸಿಕೊಂಡು ಹೋಗಿ ಎಂದು ರೈತರು ಹಠ ಹಿಡಿದು ಕೇಂದ್ರ ಸರ್ಕಾರದ ವಿರದ್ಧ ಘೋಷಣೆ ಕೂಗಿ ಆಕ್ರೋಶ. ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ಮೈಸೂರು ಬೆಂಗಳೂರು ಹೆದ್ದಾರಿ ಹಾಗೂ ರಿಂಗ್ ರಸ್ತೆ ತಡೆದು ಪ್ರತಿಭಟನೆ ಆರಂಭವಾಗಿದೆ
ಮಂಡ್ಯದ ಹೊರವಲಯ ವಿ.ಸಿ.ಫಾರಂ ಗೇಟ್ ಬಳಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.