ದಾವಣಗೆರೆ: ‘ಪಠ್ಯಪುಸ್ತಕಗಳ ಮರು ಪರಿಷ್ಕರಣೆ ಬಗ್ಗೆ ವಿವಾದವೆದ್ದಿದೆ. ವಿದ್ಯಾರ್ಥಿಗಳು, ಪೋಷಕರಲ್ಲಿ ಗೊಂದಲ ಸೃಷ್ಟಿಸಬಾರದು. ಶೈಕ್ಷಣಿಕ ಕ್ಷೇತ್ರದ ಘನತೆಯನ್ನು ಉಳಿಸಲು ಮುಖ್ಯಮಂತ್ರಿ ಅವರು ಮಧ್ಯಪ್ರವೇಶ ಮಾಡಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
‘ಅನೇಕ ಪಠ್ಯಗಳನ್ನು ಕೈಬಿಡಲಾಗಿದೆ. ಬೇರೆ ಪಠ್ಯಗಳನ್ನು ಸೇರಿಸಲಾಗಿದೆ. ಕಾಲಕಾಲಕ್ಕೆ ಪರಿಷ್ಕರಣೆ ಅಗತ್ಯ. ಆದರೆ, ಪರಿಷ್ಕರಣೆಗೆ ಪಠ್ಯಕ್ರಮದ ಚೌಕಟ್ಟು ಇರುತ್ತದೆ. ಆ ಚೌಕಟ್ಟಿನಲ್ಲೇ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ನಡೆ ಯಬೇಕು’ ಎಂದು ಪ್ರತಿಪಾದಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಆಶಯಕ್ಕೆ ವಿರುದ್ಧವಾಗಿ, ಪಠ್ಯಕ್ರಮದ ಚೌಕಟ್ಟು ಮೀರಿ ಪಠ್ಯಪುಸ್ತಕ ರಚನೆ, ಪರಿಷ್ಕರಣೆ, ಮರುಪರಿಷ್ಕರಣೆಗಳು ನಡೆಯಬಾರದು’ ಎಂದು ಅವರು ಹೇಳಿದರು.
‘ನನ್ನ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ನಡೆದಾಗ ಯಾವ ಕಾರಣಕ್ಕೆ ಯಾವ ಪಠ್ಯ ಸೇರಿಸಲಾಗಿದೆ; ಕೈಬಿಡಲಾಗಿದೆ ಎಂಬ ವಿವರಗಳನ್ನು ಆವಾಗಲೇ ನೀಡಿದ್ದೇನೆ. ವೈಯಕ್ತಿಕವಾಗಿ ಕೆಲವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ನನ್ನ ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಅವರ ಮಟ್ಟಕ್ಕೆ ಇಳಿದು ಪ್ರತಿಕ್ರಿಯೆ ಕೊಡಲಾರೆ. ಆ ಸಂವೇದನೆ, ಮೌಲ್ಯವನ್ನು ಕನ್ನಡ ನನಗೆ ಕಲಿಸಿದೆ’ ಎಂದು ಪ್ರತಿಕ್ರಿಯಿಸಿದರು.