ಬೆಂಗಳೂರು: ‘ಕೋವಿಡ್ ಕಾಯಿಲೆಯಿಂದ ಚೇತರಿಸಿಕೊಂಡವರ ಆರೋಗ್ಯದ ಮೇಲೆ ಸೋಂಕು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
‘ಪ್ರಾರಂಭಿಕ ಮತ್ತು ತೀವ್ರ ಪ್ರಮಾಣದ ರೋಗ ಲಕ್ಷಣಗಳಿಂದ ಚೇತರಿಸಿಕೊಂಡವರನ್ನು ಅಧ್ಯಯನಕ್ಕೆ ಒಳಪಡಿಸಲಾಗುವುದು. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ರೋಗಗಳಿಗೆ ಒಳಪಟ್ಟವರ ಆರೋಗ್ಯದಲ್ಲಿನ ವ್ಯತ್ಯಾಸದ ಬಗ್ಗೆಯೂ ವಿಶ್ಲೇಷಣೆ ನಡೆಸಲಾಗುವುದು’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೋವಿಡ್ ಸೋಂಕಿನಿಂದ ಗುಣಮುಖ ಹೊಂದಿದವರಲ್ಲಿ ಉಂಟಾಗಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಒಂದು ವಿಶೇಷ ತಜ್ಞ ವೈದ್ಯರ ಸಮಿತಿ ರಚಿಸಲಾಗುವುದು. ಲಘು ಮತ್ತು ತೀವ್ರ ರೋಗಲಕ್ಷಣ ಹೊಂದಿದ್ದ ಮತ್ತು ವಿಶೇಷವಾಗಿ ಇತರೆ ಸಹ-ಅಸ್ವಸ್ಥತೆಗಳನ್ನು ಹೊಂದಿದ್ದ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಲಾಗುವುದು. (1/2)
‘ತಜ್ಞರ ಸಮಿತಿ ನಡೆಸುವ ಅಧ್ಯಯನದಿಂದ ಕೊರೊನಾ ಸೋಂಕು ಮನುಷ್ಯನ ದೇಹದ ಮೇಲೆ ಯಾವ ಪ್ರಮಾಣದಲ್ಲಿ ದಾಳಿ ನಡೆಸಲಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.ಸೂಕ್ತ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಕೂಡ ಸಹಕಾರಿಯಾಗಲಿದೆ’ ಎಂದು ತಿಳಿಸಿದ್ದಾರೆ.
ಅಧ್ಯಯನದ ಆಧಾರದ ಮೇರೆಗೆ ಕೋವಿಡ್-19 ಸೋಂಕಿತರ ದೂರಗಾಮಿ ಆರೋಗ್ಯದ ದೃಷ್ಟಿಯಿಂದ ನೂತನ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುವುದು. (2/2)