ಬೆಂಗಳೂರು: ಸತತ ಏರುಗತಿಯಲ್ಲಿದ್ದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಎರಡು ದಿನಗಳಿಂದ ಇಳಿಮುಖವಾಗಿವೆ. ಆದರೆ, ಸಾವಿಗೀಡಾದವರ ಸಂಖ್ಯೆ ಮತ್ತೆ ಎರಡಂಕಿ ತಲುಪಿದ್ದು, ಒಂದೇ ದಿನ ಹತ್ತು ಜನ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಸೋಮವಾರ ಹೊಸದಾಗಿ 1,445 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಭಾನುವಾರ 1,715 ಮಂದಿಗೆ ಸೋಂಕು ತಗುಲಿ, ಇಬ್ಬರು ಸಾವಿಗೀಡಾಗಿದ್ದರು. ಸೋಮವಾರ ಹೊಸ ಪ್ರಕರಣಗಳು 280 ಇಳಿಕೆಯಾಗಿದೆ. ಆದರೆ ಸಾವಿನ ಸಂಖ್ಯೆ ಎಂಟು ಹೆಚ್ಚಾಗಿದೆ. ಇನ್ನು ಭಾನುವಾರ ಒಂದು ಲಕ್ಷ ಪರೀಕ್ಷೆ ನಡೆಸಲಾಗಿತ್ತು. ಆದರೆ, ಮಾ.22ರಂದು 78 ಸಾವಿರ ಜನ ಮಾತ್ರ ಪರೀಕ್ಷೆಗೆ ಒಳಪಟ್ಟಿರುವುದು, ಹೊಸ ಪ್ರಕರಣಗಳ ಸಂಖ್ಯೆ ಇಳಿಯಲು ಕಾರಣವಾಗಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 886, ಉಡುಪಿ 113, ಮೈಸೂರು 61, ತುಮಕೂರು ಮತ್ತು ಬೀದರ್ ತಲಾ 51, ದಕ್ಷಿಣ ಕನ್ನಡ 31, ಕಲಬುರ್ಗಿ 43 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು 4, ಉತ್ತರ ಕನ್ನಡ, ತುಮಕೂರು, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡದಲ್ಲಿ ತಲಾ ಒಂದು ಸಾವಾಗಿದೆ.
ಒಟ್ಟಾರೆ 9.71 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದು, 9.44 ಲಕ್ಷ ಮಂದಿ ಕೋವಿಡ್ನಿಂದ ಮುಕ್ತರಾಗಿದ್ದಾರೆ. 12,444 ಸೋಂಕಿತರು ಸಾವಿಗೀಡಾಗಿದ್ದಾರೆ. 14,267 ಸೋಂಕಿತರು ಆಸ್ಪತ್ರೆ, ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಈ ಪೈಕಿ 136 ಮಂದಿ ಪರಿಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನ 22/03/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/lF6sRJ7vuu @mla_sudhakar @Comm_dhfwka @MDNHM_Kar @KarnatakaVarthe @PIBBengaluru @CovidKarnataka pic.twitter.com/SvAvfaQggf
— K'taka Health Dept (@DHFWKA) March 22, 2021
ಲಸಿಕೆ: ಸೋಮವಾರ 72.879 ಹಿರಿಯ ನಾಗರಿಕರು, 19727 ಆರೋಗ್ಯ ಸಮಸ್ಯೆಯುಳ್ಳವರು, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಸೇರಿ ಒಟ್ಟು 99,361 ಮಂದಿ ಲಸಿಕೆ ಪಡೆದಿದ್ದಾರೆ.
ನಿಯಮ ವಿಸ್ತರಣೆ:
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಜಾರಿ ಮಾಡಿರುವ ನಿಯಮವನ್ನು ಪಂಜಾಬ್ ಮತ್ತು ಚಂಡೀಗಡಕ್ಕೂ ವಿಸ್ತರಿಸಲಾಗಿದೆ. ಈ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು 72 ಗಂಟೆಗಳಿಗಿಂತ ಹಳೆಯದಲ್ಲದ ಕೋವಿಡ್ ನೆಗಟಿವ್ ವರದಿ ಹೊಂದಿರುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.