ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಮೃತದೇಹಗಳ ಕೋವಿಡ್ ಪರೀಕ್ಷೆ ಅನಗತ್ಯ

ಪರಿಷ್ಕೃತ ಮಾರ್ಗಸೂಚಿ *ಶರೀರ ಮುಟ್ಟದೇ ಧಾರ್ಮಿಕ ಆಚರಣೆಗೆ ಅವಕಾಶ
Last Updated 7 ಆಗಸ್ಟ್ 2020, 15:41 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಲಕ್ಷಣಗಳಿಲ್ಲದೇ ಮೃತಪಟ್ಟಿದ್ದಲ್ಲಿ ಕೋವಿಡ್ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಹಾಗೂ ಮೃತದೇಹ ಮುಟ್ಟದೇ ನಡೆಸಬಹುದಾದ ಅಂತ್ಯ ಸಂಸ್ಕಾರದ ವಿಧಿಗಳಿಗೆ ಅವಕಾಶ ಕಲ್ಪಿಸಿ ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

ಸಾವಿಗೂ ಮೊದಲು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ ಬಳಲಿದವರು (ಐಎಲ್‌ಐ), ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದವರು (ಸಾರಿ) ಸೇರಿದಂತೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರಿಗೆ ಮಾತ್ರ ಪರೀಕ್ಷೆ ನಡೆಸಬೇಕು ಎಂದು ಇಲಾಖೆ ಸೂಚಿಸಿದೆ.

ಸೋಂಕು ಶಂಕಿತ ವ್ಯಕ್ತಿ ಮೃತಪಟ್ಟ 6 ಗಂಟೆಗಳ ಒಳಗಡೆ ಅವರ ಗಂಟಲ ದ್ರವವನ್ನು ಪಡೆದು, ಕೋವಿಡ್ ಪರೀಕ್ಷೆಗೆ ಪ್ರಯೋಗಾಲಯಗಳಿಗೆ ರವಾನಿಸಬೇಕು. ವರದಿಗಾಗಿಕಾಯದೇ, ಕೋವಿಡ್‌ ರೋಗಿಗೆ ಅನುಸರಿಸುವ ಮುಂಜಾಗ್ರತೆ ಕ್ರಮಗಳನ್ನೇ ಪಾಲಿಸಿ, ಅಂತ್ಯಸಂಸ್ಕಾರ ನೆರವೇರಿಸಬೇಕು. ಅಂತ್ಯಸಂಸ್ಕಾರದಲ್ಲಿ 20ಕ್ಕೂ ಅಧಿಕ ಮಂದಿಗೆ ಪಾಲ್ಗೊಳ್ಳಲು ಅವಕಾಶವಿಲ್ಲ ಎಂದು ಇಲಾಖೆ ಸ್ಪಷ್ಟಪ‍ಡಿಸಿದೆ.

ಅಗತ್ಯ ಸುರಕ್ಷತೆಯೊಂದಿಗೆ ಕೊರೊನಾ ಸೋಂಕಿತ ಮೃತರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಬೇಕು.ಮೃತ ವ್ಯಕ್ತಿಯ ಶ್ವಾಸಕೋಶ ಮಾತ್ರ ಸೋಂಕಿತವಾಗಿರುತ್ತದೆ. ವ್ಯಕ್ತಿ ಉಸಿರಾಟ ನಿಲ್ಲಿಸಿದ ಬಳಿಕ ಸೋಂಕು ಹರಡುವುದಿಲ್ಲ. ಆದರೆ, ಮೃತ ವ್ಯಕ್ತಿಯ ದೇಹವನ್ನು ಸ್ಪರ್ಶಿಸುವುದು, ಸ್ನಾನ ಮಾಡಿಸುವುದು, ಚುಂಬಿಸುವುದು ಮಾಡಬಾರದು. ಒಮ್ಮೆ ಶರೀರವನ್ನು ಚೀಲದಲ್ಲಿ ಇರಿಸಿದ ಬಳಿಕ ಕುಟುಂಬದ ಸದಸ್ಯರು ಮೃತ ವ್ಯಕ್ತಿಯನ್ನು ನೋಡಲು ಇಚ್ಛಿಸಿದಲ್ಲಿ ಮುಖದ ಭಾಗವನ್ನು ಮಾತ್ರ ತೋರಿಸಬೇಕು.ಅಗತ್ಯ ಸುರಕ್ಷತಾ ಸಾಧನಗಳನ್ನು ಧರಿಸಿ, ಅಂತ್ಯಸಂಸ್ಕಾರ ನಡೆಸಬೇಕು. ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ, ಬೆಂಗಳೂರಿನಲ್ಲಿ ಬಿಬಿಎಂಪಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ. ‌

ಮಾರ್ಗಸೂಚಿಯ ಪ್ರಮುಖ ಅಂಶಗಳು

* ಮೃತ ದೇಹವನ್ನು ಸೋಂಕು ನಿವಾರಕದಿಂದ ಸ್ವಚ್ಛಪಡಿಸಿ, ತಲೆಯ ಭಾಗ ಮಾತ್ರ ಕಾಣುವಂತೆ ಚೀಲದಲ್ಲಿ ಇರಿಸಿ, ಕುಟುಂದದ ಸದಸ್ಯರು ಅಥವಾ ಸಂಬಂಧಿಕರಿಗೆ ಆಸ್ಪತ್ರೆಯ ಶವಾಗಾರದಲ್ಲಿ ಹಸ್ತಾಂತರಿಸಬೇಕು. ಕುಟುಂಬದ ಸದಸ್ಯರಿಗೆ ಅಂತಿಮ ಸಂಸ್ಕಾರ ನಡೆಸಲು ಸಾಧ್ಯವಾಗದೇ ಇದ್ದಲ್ಲಿ ಜಿಲ್ಲಾಡಳಿತ ನಡೆಸಬೇಕು.

*ಮೃತವ್ಯಕ್ತಿಯ ದೇಹದಿಂದ ದ್ರವ ಹೊರಸೂಸದಂತೆ ಎಲ್ಲ ರಂಧ್ರಗಳು ಹಾಗೂ ಗಾಯಗಳನ್ನು ಮುಚ್ಚಬೇಕು.

* ಮೃತ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರನ್ನು ಕಳಂಕಿತರಂತೆ ನೋಡಬಾರದು.

* ಮೃತ ಶರೀರವನ್ನು ನೇರವಾಗಿ ಚಿತಾಗಾರ ಅಥವಾ ಸ್ಮಶಾನಕ್ಕೆ ಸಾಗಿಸಲು ಕ್ರಮವಹಿಸಬೇಕು.

* ಮಂತ್ರ ಪಠಣ, ಪವಿತ್ರ ಜಲ ಚಿಮುಕಿಸುವುದು ಸೇರಿದಂತೆ ಮೃತ ಶರೀರ ಮುಟ್ಟದೇ ಹಾಗೂ ದೇಹಕ್ಕೆ ಸುತ್ತಿದ ಚೀಲ ತೆರೆಯದೇ ಧಾರ್ಮಿಕ ಆಚರಣೆ ನಡೆಸಬಹುದು.

* ಸಿಬ್ಬಂದಿ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಧರಿಸಿರಬೇಕು. ಬಳಿಕ ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.

* ಬೂದಿಯಿಂದ ಯಾವುದೇ ಅಪಾಯ ಇರುವುದಿಲ್ಲ. ಧಾರ್ಮಿಕ ವಿಧಿಗಳಿಗಾಗಿ ಬೂದಿಯನ್ನು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT