ಬೆಂಗಳೂರು: ‘ಕನ್ನಡದ ವಿಚಾರದಲ್ಲಿ ಕನ್ನಡ ಬರವಣಿಗೆಯನ್ನು ಲಘುವಾಗಿ ಕಾಣಬಾರದು’ ಎಂದು ಸಾಹಿತಿ ನಿಡಸಾಲೆ ಪುಟ್ಟಸ್ವಾಮಯ್ಯ ಅಭಿಪ್ರಾಯಪಟ್ಟರು.
ನಗರದ ಕೆಂಪೇಗೌಡ ನಿರ್ವಹಣಾ ಅಧ್ಯಯನ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸದ್ಭಾವನಾ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ 'ಕನ್ನಡ ಸ್ಪಷ್ಟ ಬರೆವಣಿಗೆ ಕಮ್ಮಟ' ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ರಾಮೀಣ ಪ್ರದೇಶದ ಜನರು ಇಂದು ಹೆಚ್ಚು ಬಳಸುವುದರಿಂದ ಕನ್ನಡ ಉಳಿದಿದೆ. ನಗರ ಪ್ರದೇಶಗಳಲ್ಲಿ ಇಂಥ ಕಮ್ಮಟಗಳ ಮೂಲಕ ಕನ್ನಡವನ್ನು ಸ್ಪಷ್ಟವಾಗಿ ಬರೆಯುವ ಮತ್ತು ಬಳಸುವ ಮೂಲಕ ಕನ್ನಡವು ಉತ್ಕೃಷ್ಟಗೊಳ್ಳಬೇಕು’ ಎಂದು ಆಶಿಸಿದರು.
ಕಮ್ಮಟದ ನಿರ್ದೇಶಕರಾದ ಕೆ. ರಾಜಕುಮಾರ್, ‘ಕಲಿಯಲಿಕ್ಕೆ ಕತ್ತೆಯಾಗು ಎಂಬ ಮಾತಿದೆ. ಇಂಥ ಕಮ್ಮಟ ಕನ್ನಡ ಸ್ಪಷ್ಟ ಬರವಣಿಗೆ ಕಲಿಯಲು ಉಪಯುಕ್ತ’ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಪ್ರಾಂಶುಪಾಲ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ಡಾ.ವೆಂಕಟೇಶ್, ಎಂ.ಜಿ. ದಯಾನಂದ ಕಟ್ಟೆ ಇದ್ದರು. ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು.