ವಿಜಯಪುರ: ಡೋಣಿ ನದಿ ಪ್ರವಾಹದಿಂದ ಜಲಾವೃತವಾದ ಸೇತುವೆ ಮೇಲೆ ಚಾಲಕ ಬಸ್ ಚಲಾಯಿಸಿದ್ದು, ಸ್ವಲ್ಪದರಲ್ಲೇ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ದೇವರಹಿಪ್ಪರಗಿ ತಾಲ್ಲೂಕಿನ ಸಾತಿಹಾಳ ಗ್ರಾಮದ ಸೇತುವೆ ಡೋಣಿ ನದಿ ಪ್ರವಾಹದಲ್ಲಿ ಎರಡು ದಿನಗಳಿಂದ ಮುಳುಗಿದ್ದು, ಜನ, ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಆದರೆ, ಶನಿವಾರ ಬೆಳಿಗ್ಗೆಹತ್ತಾರು ಪ್ರಯಾಣಿಕರಿಂದ ತುಂಬಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಅನ್ನು ಚಾಲಕ ಜಲಾವೃತವಾದ ಸೇತುವೆ ಮೇಲೆ ಚಲಾಯಿಸಿ ನಿರ್ಲಕ್ಷ್ಯ ಮೆರೆದಿದ್ದಾನೆ.
ಒಂದು ಹಂತದಲ್ಲಿ ಸೇತುವೆ ಬಿಟ್ಟು ವಾಲಿದ್ದ ಬಸ್ಸನ್ನು ದಡ ಸೇರಿಸುವಲ್ಲಿ ಚಾಲಕ ಹರಸಾಹಸ ಪಟ್ಟಿದ್ದಾನೆ.ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.