ಸತ್ತ ಕಾಡಾನೆ ಬಗೆದು ದಂತ ತೆಗೆದರು, ಆಮೇಲೆ ಮಾಡಿದ್ದೇನು ಗೊತ್ತಾ? ರೋಚಕ ಸ್ಟೋರಿ

ಹಾಸನ/ಬೆಂಗಳೂರು: ಆನೆ ದಂತ ಮಾರಾಟ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಇತ್ತೀಚೆಗಷ್ಟೇ ಬಂಧಿಸಿದ್ದ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು, ಹಾಸನ ವೀರಾಪುರದ ಜಮೀನಿನಲ್ಲಿ ಕಾಡಾನೆಯೊಂದನ್ನು ಹೂತಿದ್ದ ಸಂಗತಿ ಪತ್ತೆ ಮಾಡಿದ್ದಾರೆ.
ವೀರಾಪುರದ ಚಂದ್ರೇಗೌಡ, ತಮ್ಮಯ್ಯ, ತಿಲಕ್, ನಾಗರಾಜ್ ಹಾಗೂ ಜೆಸಿಬಿ ಯಂತ್ರದ ಮಾಲೀಕ ಪ್ರಸಾದ್ ಎಂಬುವರನ್ನು ದಂತ ಮಾರಾಟ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಇವರು ನೀಡಿದ್ದ ಮಾಹಿತಿ ಆಧರಿಸಿ ವೀರಾಪುರದಲ್ಲಿ ಭಾನುವಾರ ಕಾರ್ಯಾ
ಚರಣೆ ನಡೆಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಹೂತಿದ್ದ ಆನೆಯ ಕಳೇಬರ ಹೊರಗೆ ತೆಗೆದರು. ಕಳೇಬರ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
‘ಗ್ರಾಮದ ಕೃಷಿ ಜಮೀನಿನ ಸಮೀಪ ಸೀಗೆ ರಕ್ಷಿತಾರಣ್ಯ ಪ್ರದೇಶವಿದೆ. ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ತಂತಿ ಬೇಲಿಗೆ ಕಾನೂನು ಬಾಹಿರವಾಗಿ ವಿದ್ಯುತ್ಸಂಪರ್ಕ ನೀಡಲಾಗಿತ್ತು. ವಿದ್ಯುತ್ ತಂತಿಸ್ಪರ್ಶಿಸಿ ಇತ್ತೀಚೆಗೆ ಕಾಡಾನೆ ಮೃತ
ಪಟ್ಟಿತ್ತು’ ಎಂದು ಮೂಲಗಳು ಹೇಳಿವೆ.
‘ಆನೆ ಮೃತಪಟ್ಟಿರುವ ವಿಷಯವನ್ನು ಮುಚ್ಚಿಟ್ಟಿದ್ದ ಆರೋಪಿಗಳು, ಜಮೀನಿನಲ್ಲೇ ಜೆಸಿಬಿ ಯಂತ್ರದಿಂದ ಗುಂಡಿ ತೆಗೆದು ಮೃತದೇಹ ಹೂತಿದ್ದರು. ಶವ ಕೊಳೆತ ಬಳಿಕ ದಂತಗಳನ್ನು ಕಿತ್ತ ಆರೋಪಿಗಳು, ಅವುಗಳನ್ನು ಮಾರಾಟ ಮಾಡಲು ಬೆಂಗಳೂರಿಗೆ ಹೋಗಿದ್ದರು. ಅಲ್ಲಿಯೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ನಡೆಸಿದಾಗ, ಆನೆ ಹೂತಿದ್ದ ಮಾಹಿತಿ ಬಾಯ್ಬಿಟ್ಟಿದ್ದರು’ ಎಂದೂ ತಿಳಿಸಿವೆ.
ಅರಣ್ಯ ತನಿಖಾ ದಳದ ಡಿಸಿಎಫ್ ರವೀಂದ್ರ ಕುಮಾರ್, ‘ಬೆಂಗಳೂರಿನ ಸಿಕ್ಕ ಆನೆ ದಂತಗಳು, ವೀರಾಪುರದಲ್ಲಿ ಹೂತಿದ್ದ ಆನೆ ಮೃತದೇಹಕ್ಕೆ ಹೋಲಿಕೆಯಾಗಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ತಂತಿ ಬೇಲಿಗೆ ವಿದ್ಯುತ್ ಹರಿಸುವುದು ಶಿಕ್ಷಾರ್ಹ ಅಪರಾಧ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.