ಸಂತೇಬೆನ್ನೂರು: ಮಗಳ ವಿವಾಹ ಕೌಟುಂಬಿಕ ಕಲಹದಿಂದಾಗಿ ಬೇಸತ್ತು ತಾಯಿ, ಮಗಳು, ಮಗ ಸಮೀಪದ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚನ್ನಗಿರಿ ಸಮೀಪದ ಮರವಂಜಿ ಗ್ರಾಮದ ನಿವಾಸಿಗಳಾದ ನಿವೃತ್ತ ಶಿಕ್ಷಕ ರಾಜಪ್ಪ ಅವರ ಪತ್ನಿ ಕಮಲಮ್ಮ(50)ಮಗಳು ಶ್ರುತಿ(24) ಹಾಗೂ ಮಗ ಸಂಜಯ್(20) ಮೃತಪಟ್ಟವರು.
ರಾಜ್ಯಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಮುಗಿಸಿದ್ದ ಮಗಳು ಶ್ರುತಿ ಅವರ ಮದುವೆಗೆ ತಂದೆ ರಾಜಪ್ಪ ವರನನ್ನು ಹುಡುಕುತ್ತಿದ್ದರು.
ಶ್ರುತಿ ಅವರು ಬಂದ ಸಂಬಂಧಗಳನ್ನು ಒಪ್ಪದ ಕಾರಣ ಕುಟುಂಬದಲ್ಲಿ ಮನಸ್ತಾಪ ಉಂಟಾಗಿದೆ.ಇದರಿಂದ ನೊಂದ ತಾಯಿ, ಮಗಳು ಬುಧವಾರ ಮನೆಯಿಂದ ನಾಪತ್ತೆಯಾಗಿದ್ದರು. ಇವರನ್ನು ಹುಡುಕುತ್ತಾ ಬಂದ ಮಗ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂಜಯ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು.
ಶ್ರುತಿ ಅವರ ಮೃತ ದೇಹ ಗುರುವಾರ ಸಂತೇಬೆನ್ನೂರು ಸಮೀಪದ ಮೆದಿಕೆರೆ ಬಳಿ ಪತ್ತೆಯಾಗಿದೆ. ಸಂಜಯ್ ಅವರ ಮೃತ ದೇಹ ಶುಕ್ರವಾರ ಯಕ್ಕೆಗೊಂದಿ ಭದ್ರಾನಾಲೆಯಲ್ಲಿ ಸಿಕ್ಕಿದೆ. ಕಮಲಮ್ಮ ಅವರ ಮೃತ ದೇಹಕ್ಕಾಗಿ ಶೋಧ ನಡೆಯುತ್ತಿದೆ.