ಬೀದರ್: ಬಸವಕಲ್ಯಾಣದ ಬಿಕೆಆರ್ಡಿಬಿ ಪ್ರವಾಸಿ ಮಂದಿರದಲ್ಲಿ ಕೆಪಿಸಿಸಿ ಸದಸ್ಯ ಆನಂದ ದೇವಪ್ಪ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ವಿಜಯಸಿಂಗ್ ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ರಾಜ್ಪುತ, ಬಸವಕಲ್ಯಾಣ ತಾಲ್ಲೂಕಿನ ಜನಾಪುರದ ಓಂಪಾಟೀಲ, ಬಸವಕಲ್ಯಾಣದ ಮೀನಾಜ್, ರಾಮ್ ಜಾಧವ್ ಬೀದರ್ನ ಈರಣ್ಣ ಬಾವಗೆ, ಟಿಪ್ಪು, ಮೋಸಿನ್, ಮಂಠಾಳದ ದಾವೂದ್, ಗೋರಟಾದ ಜೈದೀಪ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆನಂದ ದೇವಪ್ಪ ದೂರು ದಾಖಲಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ್, ಭೀಮರಾವ್ ಪಾಟೀಲ ಸೇರಿದಂತೆ ಬಿಕೆಆರ್ಡಿಬಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಯುತ್ತಿದ್ದಾಗ ವಿಜಯಸಿಂಗ್ ಅವರು ಕಾರ್ಯಕ್ರಮಕ್ಕೆ ತಗಲುವ ವೆಚ್ಚದ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಅದಕ್ಕೆ ನಾನು ‘ನಿಮಗೇಕೆ ಲೆಕ್ಕ ಕೊಡಬೇಕು. ಪಕ್ಷದ ಮುಖಂಡರಿಗೆ ಮಾಹಿತಿ ಕೊಡುತ್ತೇನೆ’ ಎಂದು ಹೇಳಿದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ವಿಜಯಸಿಂಗ್ ಅವರು ಹೊರಗಡೆ ನಿಂತಿದ್ದ ತಮ್ಮ ಬೆಂಬಲಿಗರನ್ನು ಕರೆದರು. ವಿಜಯಸಿಂಗ್ ಸೇರಿ 10 ಜನ ನನ್ನ ತುಟಿ, ಎದೆ ಹಾಗೂ ಬೆನ್ನಿಗೆ ಬಲವಾಗಿ ಹೊಡೆದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.
ಬಸವಕಲ್ಯಾಣ ನಗರ ಠಾಣೆಯಲ್ಲಿ ಐಪಿಸಿ ಕಲಂ 143, 323, 504, 506, 149 ಅಡಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆಯೇ ವಿಜಯಸಿಂಗ್ ಬಂಧನ ಪೂರ್ವ ಜಾಮೀನು ಪಡೆದುಕೊಂಡಿದ್ದಾರೆ.