ವಿಜಯಪುರ: ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ನಗರದ ಖಾಸಗಿ ಹೋಟೆಲ್ನಲ್ಲಿ ಕೆಲ ಹೊತ್ತು ಗೋಪ್ಯ ಮಾತುಕತೆ ನಡೆಸಿದ್ದು, ರಾಜಕೀಯವಾಗಿ ಸಾಕಷ್ಟು ಕುತೂಹಲ ಕೆರಳಿಸಿದೆ.
ನಗರದಲ್ಲಿ ಮಂಗಳವಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೈಗೊಂಡಿರುವ ಐತಿಹಾಸಿಕ ಸ್ಮಾರಕ ಆನಂದ್ ಮಹಲ್ ನವೀಕರಣ ಕಾರ್ಯಕ್ಕೆ ಚಾಲನೆ ನೀಡಲು ಯೋಗೇಶ್ವರ್ ಆಗಮಿಸಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡಾಯ ಎದ್ದಿರುವ ಈ ಇಬ್ಬರ ಗೋಪ್ಯ ಭೇಟಿ ಮಹತ್ವ ಪಡೆದಿದೆ.
‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಒಳ್ಳೆಯ ದಿನಗಳು ಬರಲಿ. ಅವರಿಗೆ ಸದಾಕಾಲ ನನ್ನ ಬೆಂಬಲ ಇದೆ. ಅವರು ನನ್ನ ಸ್ನೇಹಿತರು’ ಎಂದು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಯೋಗೇಶ್ವರ್ ಹೇಳಿದರು.
ಸ್ವಾಮೀಜಿ ಭೇಟಿ: ವಿಜಯಪುರದ ಕಾರ್ಯಕ್ರಮದ ಬಳಿಕ ಯೋಗೇಶ್ವರ್ ಅವರು ಸಾಯಂಕಾಲ ಬಾಗಲಕೋಟೆಯ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿಯವರನ್ನು ಭೇಟಿಯಾದರು. ಶ್ರೀಗಳ ಕೊಠಡಿಯಲ್ಲಿ ಸುಮಾರು 45 ನಿಮಿಷಗಳ ಕಾಲ ಸಚಿವರು ಚರ್ಚೆ ನಡೆಸಿದರು.