ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಜನರ ಕೊಲೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ
Last Updated 23 ಏಪ್ರಿಲ್ 2021, 20:33 IST
ಅಕ್ಷರ ಗಾತ್ರ

ಬೆಂಗಳೂರು: ತಜ್ಞರ ವರದಿಯನ್ನು ರಾಜ್ಯದ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಪರಿಣಾಮವಾಗಿ ಜನರು ಕೋವಿಡ್‌ನಿಂದ ಬೀದಿಯ ಮೇಲೆ ಸಾಯುತ್ತಿದ್ದಾರೆ. ಈ ಸಾವುಗಳು ಕೋವಿಡ್‌ನಿಂದ ಆಗುತ್ತಿವೆ ಎನ್ನುವುದಕ್ಕಿಂತ ಬಿಜೆಪಿ ಸರ್ಕಾರದ ಅದಕ್ಷತೆ ಮತ್ತು ಉಡಾಫೆಯಿಂದ ಆದ ಕೊಲೆಗಳು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೋವಿಡ್‌ ಎರಡನೇ ಅಲೆ ಸ್ಫೋಟಗೊಂಡಿರುವ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆ ನೆರವಾಗುವಂತೆ ಕಾಂಗ್ರೆಸ್‌ನ ಎಲ್ಲ ಶಾಸಕರಿಗೂ ಶುಕ್ರವಾರ ಬರೆದಿರುವ ಪತ್ರದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು, ‘ಎರಡನೇ ಅಲೆ ಸ್ಫೋಟಗೊಳ್ಳಲಿದೆ ಎಂದು ತಜ್ಞರು ಸಾಕಷ್ಟು ಮುಂಚೆ ಎಚ್ಚರಿಕೆ ನೀಡಿದ್ದರು. ಅಗತ್ಯ ಪ್ರಮಾಣದ ಪ್ರಯೋಗಾಲಯ, ಆಸ್ಪತ್ರೆಗಳನ್ನು ಸಜ್ಜುಗೊಳಿಸಿ ಹಾಸಿಗೆ, ಆಮ್ಲಜನಕ, ಐಸಿಯು, ವೆಂಟಿಲೇಟರ್‌, ಔಷಧಿಯ ವ್ಯವಸ್ಥೆ ಮಾಡಿದ್ದರೆ ಈ ಪ್ರಮಾಣದ ಸಾವುಗಳು ಸಂಭವಿಸುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಮಾಡಿದ್ದ ಅರಾಜಕ ಮತ್ತು ತುಘಲಕ್‌ ಶಾಹಿ ಆಡಳಿತವನ್ನೇ ಬಿಜೆಪಿ ಸರ್ಕಾರ ಈಗಲೂ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಕೋವಿಡ್‌ನಿಂದ ಮೃತಪಟ್ಟವರ ಗೌರವಯುತ ಅಂತ್ಯಸಂಸ್ಕಾರ ನಡೆಸಲೂ ಆಗದಂತಹ ಅರಾಜಕ ಪರಿಸ್ಥಿತಿ ನಿರ್ಮಿಸಿವೆ. ಯಾವುದೇ ಮುನ್ಸೂಚನೆ ನೀಡದೆ ಬಾಗಿಲು ಮುಚ್ಚಿಸುವುದು, ಸಚಿವರು, ಅಧಿಕಾರಿಗಳು ಬಾಯಿಗೆ ಬಂದಂತೆ ಮಾತನಾಡಿ ಗೊಂದಲ ಹುಟ್ಟಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

‘ಕೋವಿಡ್ ಸಂಕಷ್ಟದ ಕಾಲದಲ್ಲಿ ಜನರ ಕೈಯಲ್ಲಿ ಹಣ ಇಲ್ಲದಿರುವಾಗ ಸರ್ಕಾರ ಪಡಿತರ ಧಾನ್ಯದ ಪ್ರಮಾಣವನ್ನೂ ಕಡಿತ ಮಾಡಿದೆ. ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಅನ್ನ, ಆಹಾರ, ಔಷಧಿ ನೀಡಿ ನೆರವಾದಂತೆ ಈ ಬಾರಿಯೂ ಮಾಡಬೇಕು’ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಶಾಸಕರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT