ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಅವರ ‘ಕ್ರಾಂತಿಕಾರಿ’ ಮಾತುಗಳೆಲ್ಲವೂ ಅಸಂಬದ್ಧ: ನಟ ಚೇತನ್‌

Last Updated 22 ಆಗಸ್ಟ್ 2021, 12:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಐದು ವರ್ಷದ ಸರ್ಕಾರ ನಡೆಸುವ ಅವಕಾಶ ಸಿಕ್ಕರೆ ಕ್ರಾಂತಿಕಾರಿ ಬದಲಾವಣೆ ತರುತ್ತೇನೆ ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕಎಚ್‌.ಡಿ ಕುಮಾರಸ್ವಾಮಿ ಅವರ ಮಾತುಗಳು ಅಸಂಬದ್ಧ ಎಂದು ನಟ ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಕರ್ನಾಟಕವನ್ನು 5 ವರ್ಷಗಳ ಕಾಲ ಮುನ್ನಡೆಸುವ ಅವಕಾಶ ಸಿಕ್ಕರೆ, 'ಕ್ರಾಂತಿಕಾರಿ' ಬದಲಾವಣೆಗಳನ್ನು ತರುತ್ತೇನೆಂದು ಎಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮೊದಲಿಗೆ, 2 ಬಾರಿ ಅವರು ಸಿಎಂ ಆಗಿದ್ದಾಗಲೂ ನಮ್ಮ ರಾಜ್ಯಕ್ಕೆ ಅಂಥ ಕ್ರಾಂತಿಕಾರಿ ಕೆಲಸ ಮಾಡಲಿಲ್ಲ. ಪ್ರಯತ್ನವನ್ನೂ ಮಾಡಲಿಲ್ಲ,‘ ಎಂದು ಅವರು ಹೇಳಿದ್ದಾರೆ.

‘ಮುಖ್ಯವಾಗಿ ಅವರಿಗೆ 'ಕ್ರಾಂತಿಕಾರಿ' ದೃಷ್ಟಿಕೋನವಿಲ್ಲ. ಅವರದ್ದು ಅಸಂಭದ್ದ ಮಾತುಗಳು,‘ ಎಂದು ಟೀಕಿಸಿದ್ದಾರೆ.

‘ರಾಜ್ಯದ ಜನತೆ ಜೆಡಿಎಸ್‌ಗೆ ಐದು ವರ್ಷದ ಸ್ವತಂತ್ರ ಅಧಿಕಾರ ನೀಡಿದರೆ ಕ್ರಾಂತಿಕಾರಿ ಬದಲಾವಣೆ ತಂದು, ಕರ್ನಾಟಕವನ್ನು ದೇಶದಲ್ಲೇ ಅಭಿವೃದ್ಧಿಯ ರಾಜ್ಯ ಮಾಡುತ್ತೇನೆ,’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಹೇಳಿದ್ದರು.

‘ರಾಷ್ಟ್ರವಾದಿ ನಟಿ’ಯರಂತೆ ಚೇತನ್‌: ಜೆಡಿಎಸ್‌ ಐಟಿ ವಿಭಾಗದ ಅಧ್ಯಕ್ಷ

ಚೇತನ್‌ ಅವರ ಈ ಅಭಿಪ್ರಾಯಕ್ಕೆ ಜೆಡಿಎಸ್‌ ಮಾಹಿತಿ ತಂತ್ರಜ್ಞಾನ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಪ್ರತಾಪ್‌ ಕಣಗಾಲ್‌ ತಿರುಗೇಟು ನೀಡಿದ್ದಾರೆ. ‘ಎಲ್ಲ ವಿಷಯವನ್ನೂ ಬಲ್ಲ, ಆದರೆ, ಯಾವುದರಲ್ಲೂ ಪರಿಣತನಲ್ಲ’ ಎಂಬ ಮಾತು ಈ ವ್ಯಕ್ತಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಚೇತನ್‌ ತಾವೊಬ್ಬ ಹೋರಾಟಗಾರ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ, ಅವರು ‘ರಾಷ್ಟ್ರವಾದಿ ನಟಿ’ಯರಂತೆ, ಕೇವಲ ಗಮನ ಸೆಳೆಯುವ ಪ್ರಯತ್ನ ಮಾಡುವ ವಿಫಲ ನಟನಾಗಿ ಉಳಿದಿದ್ದಾರೆ. ಯಾವ ವಿಷಯವನ್ನೂ ತಿಳಿಯದೆ, ಎಲ್ಲದರಲ್ಲೂ ಮೂಗು ತೂರಿಸುತ್ತಾರೆ,’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT